ವಿಜಯಪುರ: ಶ್ರೀ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ವಿಚಾರವಾಗಿ ಅನೇಕ ರೀತಿಯ ಸುದ್ದಿಗಳು ಹರಡುತ್ತಿದ್ದ ಬೆನ್ನಲ್ಲೇ ಶಾಸಕ ಯತ್ನಾಳ್ ಸ್ವಾಮೀಜಿ ದರ್ಶನ ಪಡೆದು ಹೇಳಿಕೆ ನೀಡಿದ್ದಾರೆ.
ಸ್ವಾಮೀಜಿಗಳ ದರ್ಶನದ ಬಳಿಕ ಅವರ ಆರೋಗ್ಯದ ಬಗ್ಗೆ ಮಾತನಾಡಿದ ನಗರ ಶಾಸಕ ಯತ್ನಾಳ್ ‘ಶ್ರೀಗಳ ಆರೋಗ್ಯ ಕುರಿತು ಆತಂಕ ಪಡಬೇಕಾಗಿಲ್ಲ. ಸ್ವಾಮೀಜಿಗಳು ಆರಾಮಾಗಿದ್ದಾರೆ. ವೈದ್ಯರು ಟ್ರೀಟ್ಮೆಂಟ್ ನೀಡಿದ್ದಾರೆ. ಈಗ ಸ್ವಾಮೀಜಿ ಕೈ ಸನ್ನೆ ಮಾಡಿ ನನಗೆ ಆರ್ಶೀವಾದ ಮಾಡಿದ್ದಾರೆ. ಭಕ್ತರು ಆತಂಕ ಪಡೋದು ಬೇಡ. ಕೆಲ ವ್ಯಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿ ಬಿಡುತ್ತಿದ್ದಾರೆ. ಅವನ್ನು ನಂಬಬೇಡಿ’ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.
ಇನ್ನು ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ‘ಸ್ವಾಮೀಜಿ ಬೆಳಿಗ್ಗೆಯಿಂದ ಹುಷಾರಾಗಿದ್ದಾರೆ. ಭಕ್ತರು ಇಲ್ಲಿರದೇ ಮನೆಗೆ ತೆರಳಿ. ಭಕ್ತರು ಗಲಾಟೆ ಮಾಡಬೇಡಿ. ದುಖಃ ಪಡಬೇಡಿ. ಸೋಷಿಯಲ್ ಮೀಡಿಯಾ ನಂಬಬೇಡಿ. ಶ್ರೀಗಳು ಆರೋಗ್ಯಯುತರಾಗಿ ಮತ್ತೇ ಪ್ರವಚನ ಹೇಳುತ್ತಾರೆ. ಹೆಚ್ಚು ಭಕ್ತರು ಸೇರುವ ಕಾರಣ ಸಮಸ್ಯೆ ಆಗುತ್ತಿದೆ. ಇಲ್ಲೇ ಇದ್ದರೆ ತೊಂದರೆ ಆಗುತ್ತದೆ. ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದಾರೆ, ಅದೊಂದು ಪವಾಡದಿಂದಾಗಿ ಪೂಜ್ಯರು ನಮ್ಮ ನಡುವೆ ಇದ್ದಾರೆ. ಅವರ ಆಕ್ಸಿಜನ್ ಪ್ರಮಾಣ ಸರಿ ಇದೆ, ತಮ್ಮ ದರ್ಶನಕ್ಕೆ ಬಂದವರನ್ನು ಶ್ರೀಗಳು ಗುರುತು ಹಿಡಿಯುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿ ಬಿಡುವವರು ಬೇಗನೇ ಡಿಲಿಟ್ ಮಾಡಿ’ ಎಂದು ಹೇಳಿದ ಯತ್ನಾಳ್, ಪುಂಡರಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
ಸ್ಚಾಮೀಜಿಗಳ ಚಿಕಿತ್ಸೆ ನೀಡುತ್ತಿರೋ ವೈದ್ಯರೂ ಹೇಳಿಕೆ ನೀಡಿದ್ದು ‘ಪೂಜ್ಯರ ಆರೋಗ್ಯ ಸ್ಥಿರವಾಗಿದೆ. ಅವರ ನಾಡಿ ಬಡಿತ, ಉಸಿರಾಟ ಎಲ್ಲವೂ ಸರಿಯಾಗಿದೆ. ಔಷಧಿಗಳನ್ನು ನೀಡಲಾಗುತ್ತಿದೆ. ಆಶ್ರಮದ ಯೂಟ್ಯೂಬ್ ಲೈವ್ನಲ್ಲಿ ಸ್ವಾಮೀಜಿಗಳ ದರ್ಶನ ಮಾಡಿ’ ಎಂದು ವೈದ್ಯ ಮನವಿ ಮಾಡಿದ್ದಾರೆ.