ತುಮಕೂರು: ”ಶಿರಾ ತಾಲೂಕಿನ ಜನರೇ, ನನಗೆ ವಿಷ ಕೊಡ್ತೀರೋ, ಹಾಲು ಕೊಡ್ತೀರೋ ಅದರು ನಿಮಗೆ ಬಿಟ್ಟದ್ದು” ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ರಂಗೇರಿದೆ. ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರವನ್ನು ಮತ್ತೆ ಗೆಲ್ಲುವುದು ಜೆಡಿಎಸ್ಗೆ ಪ್ರತಿಷ್ಠೆಯ ಪ್ರತೀಕವೂ ಹೌದು, ಬಿಜೆಪಿ-ಕಾಂಗ್ರೆಸ್ ಕೂಡ ಶಿರಾ ಮೇಲೆ ಕಣ್ಣಿಟ್ಟಿವೆ. ಹಾಗಾಗಿ ಭಾವನಾತ್ಮಕ ಅಸ್ತ್ರ ಪ್ರಯೋಗಿಸುತ್ತಿರುವ ಎಚ್ಡಿಕೆ, ”ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾವನ್ನು ನಾವೇ ಗೆಲ್ಲಬೇಕಾದ ಕ್ಷೇತ್ರ” ಎಂದು ಸರಣಿ ಟ್ವೀಟ್ ಮಾಡಿದ್ದರು. ಅಲ್ಲದೆ ಬುಧವಾರ ಶಿರಾದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ಇದೇ ಅಸ್ತ್ರ ಬಳಸಿದ ಎಚ್ಡಿಕೆ, ”ನನಗೆ ವಿಷ ಕೊಡ್ತಿರೋ, ಹಾಲು ಕೊಡ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಈ ಚುನಾವಣೆಯಲ್ಲಿ ನಾವು ಗೆಲ್ಲಲೇ ಬೇಕು. ಕಾರ್ಯಕರ್ತರ ಅಂತಿಮ ಅಭಿಪ್ರಾಯ ಪಡೆದು ಇನ್ನೆರಡು ದಿನದಲ್ಲಿ ಟಿಕೆಟ್ ಫೈನಲ್ ಮಾಡ್ತೀವಿ” ಎಂದರು.
”ಕಾಂಗ್ರೆಸ್ ಮತ್ತು ಬಿಜೆಪಿ ಬಹಳ ವೇಗದಲ್ಲಿ ಹೊರಟಿವೆ. ಸಭೆ ಸಮಾರಂಭ ನಡೆಸಿವೆ. ಕೆಲ ಕಾರಣಗಳಿಂದ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲು ಆಗಿಲ್ಲ. ಈ ಕಾರಣಕ್ಕೆ ಕಾರ್ಯಕರ್ತರು ಎದೆಗುಂದಬೇಕಿಲ್ಲ. ಈ ಕ್ಷೇತ್ರದಲ್ಲಿ ಕಾಡುಗೊಲ್ಲರು ನನಗೆ ಸತ್ಕಾರ ನೀಡಿದ್ದಾರೆ. ನಾನು ಗ್ರಾಮ ವಾಸ್ತವ್ಯ ಮಾಡಿದ್ದು ಕಾಡು ಗೊಲ್ಲರ ಮನೆಯಲ್ಲಿ. ಶಿರಾ ಕ್ಷೇತ್ರದಲ್ಲಿ ಗೊಲ್ಲ ಸಮುದಾಯದ ಮತ ನಿರ್ಣಾಯಕ” ಎಂದರು.
‘ನಾವು ಸೂತಕದ ಮನೆಯಲ್ಲಿದ್ದೇವೆ, ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ…’