ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ 3 ಕೋಟಿ ಸಂಪತ್ತಿನ ಒಡತಿಯಾದರೂ 1 ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿದ್ದಾರೆ!
ಅಮ್ಮಾಜಮ್ಮ ಮಾಜಿ ಶಾಸಕ ದಿ. ಸತ್ಯನಾರಾಯಣ ಅವರ ಪತ್ನಿ. ಶಿರಾ ತಾಲೂಕು ಮೂಗನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿವರೆಗೆ ವ್ಯಾಸಂಗ ಮಾಡಿರುವ ಅಮ್ಮಾಜಮ್ಮಗೆ 1 ಕೋಟಿ ಸಾಲ ಇದೆ. ಸತ್ಯನಾರಾಯಣ ಹೆಸರಲ್ಲಿ 31,91,770 ರೂಪಾಯಿ ಸಾಲ ಇದ್ದರೆ, ಅಮ್ಮಾಜಮ್ಮ ಹೆಸರಲ್ಲಿ 69,43,036 ರೂ. ಸಾಲ ಇದೆ. ಪತಿಗಿಂತಲೂ ಅಮ್ಮಾಜಮ್ಮ ಮೇಲೆ ಹೆಚ್ಚಿನ ಸಾಲ ಇದೆ. ಈಗ ಪತಿಯ ಸಾಲದ ಹೊರೆಯೂ ಅವರ ಮೇಲೆ ಬಿದ್ದಿದೆ.
ಇತ್ತೀಚೆಗೆ ನಿಧನ ಹೊಂದಿದ ಪತಿ ಸತ್ಯನಾರಾಯಣ ಹೆಸರಲ್ಲಿ 3 ಕೋಟಿ ಮೌಲ್ಯದ ಚರ-ಸ್ಥಿರಾಸ್ತಿ ಇದೆ. ಅಮ್ಮಾಜಮ್ಮರ ವಾರ್ಷಿಕ ಆದಾಯ 3,15,522 ರೂಪಾಯಿ. 60 ಲಕ್ಷ ಮೌಲ್ಯದ 1,200 ಗ್ರಾಂ ಚಿನ್ನಾಭರಣ, 4.20 ಲಕ್ಷ ರೂ. ಮೌಲದ್ಯ 7 ಕೆಜಿ ಬೆಳ್ಳಿ ಹೊಂದಿದ್ದಾರೆ. ನಗದು 25 ಸಾವಿರ ರೂ. ಹಾಗೂ ವಿವಿಧ ಬ್ಯಾಂಕ್, ಠೇವಣಿ, ಷೇರುಗಳ ರೂಪದಲ್ಲಿ 21.40 ಲಕ್ಷ ರೂ. ತೊಡಗಿಸಿದ್ದಾರೆ. ಅವರ ಒಟ್ಟು ಚರಾಸ್ತಿ 85,85,774.19 ರೂ. ಇದೆ.
ಪತಿ ಸತ್ಯನಾರಾಯಣ ಹೆಸರಲ್ಲಿ 2 ಇನ್ನೋವಾ ಕಾರುಗಳಿವೆ. ಇವುಗಳ ಮೌಲ್ಯ 42 ಲಕ್ಷ ರೂಪಾಯಿ. ಇನ್ನೂ 1.5 ಲಕ್ಷ ರೂ. ಬೆಲೆಯ ಕೆಟ್ಟುನಿಂತಿರುವ ಟ್ರ್ಯಾಕ್ಟರ್ ಇದೆ.
ಭುವನಹಳ್ಳಿಯಲ್ಲಿ 19 ಎಕರೆ ಜಮೀನು ಅಮ್ಮಾಜಮ್ಮ ಹೆಸರಲ್ಲಿದ್ದು, ಇದರ ಮಾರುಕಟ್ಟೆ ಬೆಲೆ 82,54,784 ರೂಪಾಯಿ. ಶಿರಾಗೇಟ್ನಲ್ಲಿ ಲಕ್ಷ್ಮೀರಂಗನಾಥ್ ಎಂಟರ್ಪ್ರೈಸಸ್ ಹೆಸರಲ್ಲಿ ಬಿಲ್ಡಿಂಗ್ ಇದ್ದು, ಅಮ್ಮಾಜಮ್ಮ ಶೇ.60 ಪಾಲುದಾರಿಕೆ ಹೊಂದಿದ್ದಾರೆ. ಇದರ ಮಾರುಕಟ್ಟೆ ಮೌಲ್ಯ 1.50 ಕೋಟಿ ರೂ. ಇದೆ. ಒಟ್ಟಾರೆ ಸ್ಥಿರಾಸ್ತಿಯ ಮೌಲ್ಯ 2,32,54,784 ರೂಪಾಯಿ.
ಇನ್ನು ಸತ್ಯನಾರಾಯಣ ಹೆಸರಲ್ಲೂ ಭುವನಹಳ್ಳಿಯಲ್ಲಿ 60 ಲಕ್ಷ ರೂ. ಮೌಲ್ಯದ 10 ಎಕರೆ ಜಮೀನು ಇದೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ನಿವೇಶನವಿದ್ದು, ಇದರ ಮೌಲ್ಯ 1 ಕೋಟಿ ರೂಪಾಯಿ. ಶಿರಾದ ಕೆಎಸ್ಆರ್ ಲೇಔಟ್ನಲ್ಲಿ ವಾಸಕ್ಕೊಂದು ಮನೆ ಇದೆ. ಇದರ ಬೆಲೆ 20 ಲಕ್ಷ ರೂಪಾಯಿ. ಒಟ್ಟು ಸ್ಥಿರಾಸ್ತಿ 1,80,22,750 ರೂ. ಮೌಲ್ಯದ್ದಾಗಿದೆ.
ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್ಗೌಡ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಸಲ್ಲಿಸಿಲ್ಲ. ಶುಕ್ರವಾರ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದು, ಆ ಸಂದರ್ಭದಲ್ಲಿ ಅಫಿಡವಿಟ್ ಸಲ್ಲಿಸಲಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷೆ ಸೇರಿ ಹಲವರಿಗೆ ಕೋಟ್ಯಂತರ ರೂ. ವಂಚನೆ, ಮಂಗಳಮುಖಿಯಿಂದ ಬಯಲಾಯ್ತು ಸ್ಫೋಟಕ ರಹಸ್ಯ!