ಬೈಂದೂರು: ಕಳೆದ ಹದಿನೈದು ದಿನಗಳಿಂದ ಪ್ರತಿದಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಮುರ್ಡೇಶ್ವರಕ್ಕೆ ಲಾರಿಗಳಲ್ಲಿ ನಿಯಮ ಬಾಹಿರವಾಗಿ ಶಿಲೆಕಲ್ಲು ಸಾಗಾಟವಾಗುತ್ತಿದ್ದು, ಸಂಬಂಧಪಟ್ಟ ಇಲಾಖೆ ಮಾತ್ರ ಕ್ರಮಕೈಗೊಂಡಿಲ್ಲ.
ಸರ್ಕಾರದ ನಿಯಮ ಪ್ರಕಾರ ಸಣ್ಣ ಟಿಪ್ಪರ್ಗಳಲ್ಲಿ 12ರಿಂದ 16 ಹಾಗೂ ದೊಡ್ಡ ವಾಹನಗಳಲ್ಲಿ 25 ಟನ್ ಸರಕು ಸಾಗಿಸಬಹುದಾಗಿದೆ. ಮಾತ್ರವಲ್ಲದೆ ಇತರ ವಾಹನಗಳಿಗೆ ಧೂಳು, ಮಣ್ಣು ತಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿದೆ. ಆದರೆ ಪ್ರಸ್ತುತ ಶಿಲೆಕಲ್ಲು ಸಾಗಿಸುವ ಲಾರಿಗಳು ಸಾಮರ್ಥ್ಯ ಮೀರಿ ಕಲ್ಲುಗಳನ್ನು ತುಂಬಿಸಿಕೊಂಡು ಹೋಗುತ್ತಿವೆ. ಕಲ್ಲುಗಳನ್ನು ಅಪಾಯಕಾರಿಯಾಗಿ ಲೋಡ್ ಮಾಡಲಾಗಿದ್ದು ಹೆದ್ದಾರಿಯಲ್ಲಿ ಉದುರಿ ಬೀಳುವ ಸಂಭವವು ಇದೆ.
ಕುಂದಾಪುರದಿಂದ ಟ್ರಾಫಿಕ್ ಪೊಲೀಸ್, 102 ವಾಹನ, ಎರಡೆರಡು ಚೆಕ್ಪೋಸ್ಟ್, ಹತ್ತಾರು ಪೊಲೀಸ್ ತಪಾಸಣೆಗಳ ನಡುವೆಯೂ ಕೂಡ ಈ ರೀತಿ ಶಿಲೆಕಲ್ಲು ಸಾಗಾಟದ ಲಾರಿಗಳಿಗೆ ಕೇಸ್ ದಾಖಲಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸಮುದ್ರ ತಡೆಗೋಡೆ ಕಾಮಗಾರಿಗಳಿಗೆ ಶಿಲೆಕಲ್ಲು ಸಾಗಾಟ ಮಾಡಲಾಗುತ್ತಿದ್ದು ಅಪಾಯಕಾರಿ ರೀತಿಯಲ್ಲಿ ಸಾಗಾಟಕ್ಕೆ ಕಡಿವಾಣ ಹಾಕಲು ಇಲಾಖೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕಿದೆ.
ಓವರ್ಲೋಡ್ ವಾಹನಗಳಿಗೆ ನಾವು ತಡೆದು ಎಚ್ಚರಿಕೆ ಕೊಡಬಹುದೇ ಹೊರತು ಕೇಸ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆರ್ಟಿಒ ಅಧಿಕಾರಿಗಳು ಇಂತಹ ವಾಹನಗಳನ್ನು ತಪಾಸಣೆ ಮಾಡಿ ಕ್ರಮ ತೆಗೆದುಕೊಳ್ಳಬಹುದು.
ಸಂತೋಷ್ ಆನಂದ್ ಕಾಯ್ಕಿಣಿ
ವೃತ್ತ ನಿರೀಕ್ಷಕರು ಬೈಂದೂರುನಿಯಮ ಉಲ್ಲಂಘಿಸಿದ ಯಾವುದೇ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಓವರ್ಲೋಡ್ ಸಾಗಾಟದ ಬಗ್ಗೆ ಮಾಹಿತಿ ಇಲ್ಲದ ಕಾರಣ ನಮಗೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುತ್ತೇವೆ.
ಜೆ.ಪಿ.ಗಂಗಾಧರ್
ಆರ್ಟಿಒ ಉಡುಪಿ