ಶಿವಮೊಗ್ಗ: ನಾಲ್ಕು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ತುಂಗಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಗೋಂಧಿ ಚಟ್ನಳ್ಳಿ ಗ್ರಾಮದ ನಟೇಶ್ (೩೦) ಬಂಧಿತ ಆರೋಪಿ. ಈತ 2013ರಲ್ಲಿ ದಾಖಲಾಗಿದ್ದ ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿಯಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಈತ 2016ರಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಹಾಗಾಗಿ ನಟೇಶ್ ವಿರುದ್ಧ ನ್ಯಾಯಾಲಯವು ಬಂಧನದ ವಾರೆಂಟ್ ಹೊರಡಿಸಿತ್ತು. ಆರೋಪಿ ಪತ್ತೆಗಾಗಿ ತುಂಗಾನಗರ ಠಾಣೆ ಪಿಎಸ್ಐ ಜಿ. ತಿರುಮಲೇಶ್, ಎಎಸ್ಐ ರಾಮ್ ಕುಮಾರ್, ಮುಖ್ಯ ಪೇದೆ ಸೋಮಾನಾಯ್ಕ್ ಅವರನ್ನು ನೇಮಕ ಮಾಡಿದ್ದರು. ಆರೋಪಿ ವಿಳಾಸದಲ್ಲಿರುವ ಬಗ್ಗೆ ಖಚಿತ ಮೇರೆಗೆ ಬುಧವಾರ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.