ಶಿವಮೊಗ್ಗ: ಭೂತಾನ್ನಿಂದ 17 ಸಾವಿರ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ರಾಜ್ಯದ ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲಿನ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಭಾರತದಿಂದ ಭೂತಾನ್ಗೆ ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳು ಹೆಚ್ಚಿನ ಪ್ರಮಾಣದ ರಫ್ತಾಗುತ್ತಿದೆ. ಆಮದು ಮಾಡಿಕೊಳ್ಳುತ್ತಿರುವ ಹಸಿ ಅಡಕೆ ಪ್ರಮಾಣಕ್ಕೆ ಹೋಲಿಸಿದರೆ ನಮ್ಮ ರಫ್ತು ಹೆಚ್ಚಿದೆ. ಮೇಲಾಗಿ ನೆರೆಯ ಭೂತಾನ್ ಬಹಳ ಹಿಂದಿನಿಂದಲೂ ನಮ್ಮೊಂದಿಗೆ ಉತ್ತಮ ವಾಣಿಜ್ಯ ಸಂಬಂಧ ಹೊಂದಿದೆ. ಈ ಕಾರಣಕ್ಕೆ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಹಸಿ ಅಡಕೆ ಆಮದಿಗೆ ನಿರ್ಧರಿಸಿದೆ ಎಂದಿದ್ದಾರೆ.
ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕವಿರಿಸಿಕೊಂಡು ಅಡಕೆ ಮಾರುಕಟ್ಟೆಯ ಸ್ಥಿರತೆ ಕಾಯ್ದುಕೊಂಡಿದ್ದೇವೆ. ಮುಂದಿನ ದಿನಗಳಲ್ಲೂ ಕೇಂದ್ರದೊಂದಿಗೆ ಚರ್ಚಿಸಲಾಗುವುದು. ಲೋಕಸಭಾ ಸದಸ್ಯರ ನಿಯೋಗದಲ್ಲಿ ತೆರಳಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ರೈತರ ಆತಂಕವನ್ನು ವಿವರಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.