More

    ಹೆಚ್ಚಿದ ಸ್ಪರ್ಧೆಯಿಂದ ವಿವಿಗಳಿಗೆ ಸವಾಲು

    ಶಿವಮೊಗ್ಗ: ಕಳೆದೊಂದು ದಶಕದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಖಾಸಗಿ ಮತ್ತು ಡೀಮ್ಡ್ ವಿವಿಗಳ ತೀವ್ರ ಸ್ಫರ್ಧೆಯ ನಡುವೆ ಸರ್ಕಾರಿ ಅನುದಾನಿತ ವಿವಿಗಳು ಸ್ವಾಯತ್ತತೆ ಉಳಿಸಿಕೊಳ್ಳುವುದೇ ಸವಾಲಿನ ವಿಚಾರವಾಗಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
    ಕುವೆಂಪು ವಿವಿ ಅಧ್ಯಾಪಕರ ಸಂಘದಿಂದ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವಿವಿ ವ್ಯವಸ್ಥೆಯೇ ಸಂಪೂರ್ಣ ಬುಡಮೇಲಾಗುತ್ತಿದೆ. ಒಂದೆಡೆ ಸರ್ಕಾರದ ಅನುದಾನ ಕಡಿತಗೊಳ್ಳುತ್ತಿದ್ದರೆ ಇನ್ನೊಂದೆಡೆ ವಿವಿಗಳು ಬಹುತೇಕ ಸ್ವಾಯತ್ತತೆ ಕಳೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
    ಹೊಸ ಶಿಕ್ಷಣ ನೀತಿಯ ಅನುಷ್ಠಾನದ ನಂತರ ಶಿಕ್ಷಣ ಕ್ಷೇತ್ರ ಕೂಡ ಮುಕ್ತವಾಗಿದೆ. ಸರ್ಕಾರಿ ವಿವಿಗಳು, ಖಾಸಗಿ ವಿವಿಗಳು, ಕಾಲೇಜುಗಳು, ಡೀಮ್ಡ್ ಶಿಕ್ಷಣ ಸಂಸ್ಥೆಗಳು, ಹೀಗೆ ಎಲ್ಲವೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದರ ಜೊತೆಗೆ ಸರ್ಕಾರದ ಅನುದಾನವನ್ನು ನಿರೀಕ್ಷಿಸದೇ ತಮ್ಮ ಸಂಪನ್ಮೂಲಗಳನ್ನು ತಾವೇ ಕ್ರೋಢೀಕರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂತಹ ಸವಾಲಿನ ಸಮಯದಲ್ಲಿ ವಿವಿಗಳು ಸ್ವಾವಲಂಬಿಗಳಾಗುವತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದರು.
    ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ದೂರಶಿಕ್ಷಣ ಕೋರ್ಸ್‌ಗಳನ್ನು ನಡೆಸುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದ ಕುವೆಂಪು ವಿವಿ ಈಗ ಸರ್ಕಾರದ ಅನುದಾನಕ್ಕೆ ಕಾಯಬೇಕಾದ ಗಂಭೀರ ಸ್ಥಿತಿಯಲ್ಲಿದೆ. ಸರ್ಕಾರ ಎಲ್ಲ ವಿವಿಗಳ ದೂರ ಶಿಕ್ಷಣ ಕೋರ್ಸ್‌ಗಳಿಗೆ ಕಡಿವಾಣ ಹಾಕಿದ್ದು ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಿದರು.
    ಕುಲಸಚಿವೆ ಜಿ.ಅನುರಾಧಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಭೋಜ್ಯಾನಾಯ್ಕೊ, ಕಾರ್ಯದರ್ಶಿ ಪ್ರೊ.ಪ್ರಶಾಂತ ನಾಯಕ, ಪ್ರಮುಖರಾದ ಪ್ರೊ.ವೆಂಕಟೇಶ್, ಪ್ರೊ. ಯಾದವ್ ಬೋಡ್ಕೆ, ಪ್ರೊ.ನಾಗರಾಜ್ ಮುಂತಾದವರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts