More

    ಹಕ್ಕಿ ಕತೆ ನಾಟಕಕ್ಕೆ ಸಾಕಷ್ಟು ಮೆಚ್ಚುಗೆ

    ಶೃಂಗೇರಿ: ಶಿವಮೊಗ್ಗ ರಂಗಾಯಣವು ನಿರ್ವಿುಸಿರುವ ‘ಹಕ್ಕಿ ಕತೆ’ ನಾಟಕವು ಕನ್ನಡ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸುವ ವಿಶ್ವಾಸವಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ತಿಳಿಸಿದರು.

    ಶೃಂಗೇರಿಯ ಶ್ರೀ ಭಾರತೀತೀರ್ಥ ಸಾಂಸ್ಕೃತಿಕ ಮತ್ತು ಜಾನಪದ ಅಧ್ಯಯನ ಕೇಂದ್ರ ಟ್ರಸ್ಟ್, ಜೆಸಿಐ, ಜ್ಞಾನಭಾರತಿ ಶಿಕ್ಷಣ ಸಂಸ್ಥೆಯಿಂದ ಏರ್ಪಡಿಸಿದ್ದ ‘ರಂಗ ಶೃಂಗೇರಿ’ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

    ನಾಡಿನ ಶ್ರೇಷ್ಠ ಸಾಹಿತಿ ನಾ. ಡಿಸೋಜ ಅವರ ‘ಹಕ್ಕಿಗೊಂದು ಗೂಡು ಕೊಡಿ’ ಕಾದಂಬರಿ ಆಧರಿಸಿ ಸಿದ್ಧಪಡಿಸಿರುವ ಈ ನಾಟಕದಲ್ಲಿ ಪ್ರಕೃತಿ ಮೇಲೆ ಮಾನವನ ದೌರ್ಜನ್ಯವನ್ನು ಹಕ್ಕಿಗಳ ಕತೆ ಮೂಲಕ ತೋರಿಸಲಾಗಿದೆ. ಜಪಾನ್​ನ ಬುನ್ರಕು ಶೈಲಿಯ ಗೊಂಬೆ ಆಟವನ್ನು ನಾಟಕದಲ್ಲಿ ಅಳವಡಿಸಿದ್ದು, ನಾಟಕಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

    ರಮೇಶ್ ಬೇಗಾರ್ ಅವರೊಂದಿಗೆ ಮೂರು ದಶಕದ ರಂಗ ಸಾಂಗತ್ಯ ಹೊಂದಿರುವ ನಾನು, ಅವರ ಸಂಘಟನೆಯ ವೈಶಿಷ್ಟ್ಯ ಮೆಚ್ಚುವಂಥದ್ದು. ಇಂತಹ ಕಲಾವಿದರಿಂದ ಮಲೆನಾಡ ಪ್ರಮುಖ ರಂಗಕೇಂದ್ರವಾಗಿ ಶೃಂಗೇರಿ ಗುರುತಿಸಿಕೊಳ್ಳುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಶೃಂಗೇರಿಯ ಹಿರಿಯ ಹವ್ಯಾಸಿ ರಂಗಕಲಾವಿದೆ ಪುಷ್ಪಾ ಶ್ರೀಕಾಂತ್, ರಂಗಮಿತ್ರರ ಮೂಲಕ ಹಲವು ಪೌರಾಣಿಕ ಮತ್ತು ಸಾಮಾಜಿಕ ನಾಟಕದಲ್ಲಿ ಭಾವಪೂರ್ಣ ಪಾತ್ರ ನಿಭಾಯಿಸುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.

    ಜೆಸಿಐ ಅಧ್ಯಕ್ಷ ಎ.ಜಿ.ಪ್ರಶಾಂತ್ ಮಾತನಾಡಿ, ವಿಭಿನ್ನ ನಾಟಕಗಳನ್ನು ಒಳಗೊಂಡ ಈ ಉತ್ಸವವನ್ನು ಆಯೋಜಿಸಲು ಅವಕಾಶ ದೊರೆತಿದ್ದು ಸಂಸ್ಥೆಗೆ ಹೆಮ್ಮೆ. ಮುಂದೆಯೂ ರಂಗ ಚಟುವಟಿಕೆಗೆ ಕೈಜೋಡಿಸಲಿದೆ ಎಂದು ತಿಳಿಸಿದರು.

    ಮಕ್ಕಳನ್ನು ರಂಜಿಸಿದ ಪ್ರದರ್ಶನ: ರಂಗಾಯಣದ ಕಲಾವಿದರು ಪ್ರಸ್ತುತಪಡಿಸಿದ ಹಕ್ಕಿ ಕತೆ ನಾಟಕ ಮಕ್ಕಳನ್ನು ರಂಜಿಸಿತು. ಮಾಲತಿ ಸಾಗರ ರಚಿಸಿದ ನಾಟಕವನ್ನು ಗಣೇಶ್ ಮಂರ್ದತಿ ಮತ್ತು ಶ್ರವಣ್ ಹೆಗ್ಗೋಡು ನಿರ್ದೇಶಿಸಿದ್ದರು. ಸಹ್ಯಾದ್ರಿ ಬೆಟ್ಟದ ಮಡಲಿನ ಪಕ್ಷಿ ಸಂಕುಲವನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುವ, ಹಕ್ಕಿಗಳ ಕುಟುಂಬ ವಲಸೆಹೋಗುತ್ತ ಕಷ್ಟಪಡುವ ದೃಶ್ಯಗಳನ್ನು ಕಲಾವಿದರು ಚೆನ್ನಾಗಿ ಕಟ್ಟಿಕೊಟ್ಟರು. ಕೊನೆಯಲ್ಲಿ ಪ್ರಕೃತಿಯೇ ಮಾನವನ ವಿರುದ್ಧ ತಿರುಗಿಬಿದ್ದು, ಮನುಷ್ಯನ ಪಶ್ಚಾತ್ತಾಪಕ್ಕೆ ಕಾರಣವಾಗುವ ಮನೋಜ್ಞ ಹಕ್ಕಿ ಕತೆ ಸಮಕಾಲಿನ ಜಗತ್ತಿನ ಸಮಸ್ಯೆಯೊಂದನ್ನು ಪರಿಣಾಮಕಾರಿಯಾಗಿ ಮೂಡಿಸಿತು.

    ಕಾರ್ಯಕ್ರಮ ಸಂಘಟಕ ರಮೇಶ್ ಬೇಗಾರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts