ಶಿವಮೊಗ್ಗ: ಭಾರತ ಚಾರಿತ್ರೃವಂತ ದೇಶವಾಗಿದ್ದು ಇಡೀ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಗೌರವ ಸಿಕ್ಕಿರುವುದಕ್ಕೆ ಮಾಧ್ಯಮಗಳೇ ಕಾರಣ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.
ನಗರದ ಮಹಾನಗರ ಪಾಲಿಕೆ ಸಮೀಪದ ಸಿಟಿ ಕ್ಲಬ್ ಆವರಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ನೂತನ ಮೀಡಿಯಾ ಹೌಸ್ ಉದ್ಘಾಟಿಸಿ ಮಾತನಾಡಿ, ನಾಲ್ಕನೇ ಅಂಗವಾದ ಮಾಧ್ಯಮ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಮಾಧ್ಯಮ ಅಥವಾ ಪತ್ರಿಕಾರಂಗ ಯಾವುದೇ ಕಾರಣಕ್ಕೂ ವ್ಯಕ್ತಿ, ಸಂಘ, ಪಕ್ಷದ ವೈಭವೀಕರಣ ಮಾಡಬಾರದು. ತಪ್ಪಾಗಿದ್ದರೆ ತಿದ್ದಬೇಕೋ ವಿನಃ ವೈಯಕ್ತಿಕವಾಗಿ ಟೀಕೆ ಮಾಡಬಾರದು. ತಪ್ಪು ಮಾಡುವವರನ್ನು ತಿದ್ದಿದಾಗ ಆತ ಭವಿಷ್ಯದಲ್ಲಿ ಚಾರಿತ್ರೃವಂತನಾಗಲು ಸಾಧ್ಯವಿದೆ. ಅಂತಹ ಕೆಲಸ ಮಾಧ್ಯಮಗಳಿಂದ ಮತ್ತಷ್ಟು ಆಗಬೇಕಿದೆ ಎಂದು ಸಲಹೆ ನೀಡಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಲೇಖನಿ, ಸಾಹಿತ್ಯದ ಮೂಲಕವೂ ಸ್ವಾತಂತ್ರೃ ಹೋರಾಟಗಾರರನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡಿದ್ದರು. ಸ್ವಾತಂತ್ರೃ ಹೋರಾಟಕ್ಕೆ ಶಕ್ತಿ ತುಂಬಿದ್ದೇ ಪತ್ರಕರ್ತರು. ದೇಶಕ್ಕೆ ಸುಗಮ ಹಾದಿ ತೋರಿಸುವ ದೊಡ್ಡ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಸಂಘಕ್ಕೆ ಬದ್ಧತೆ, ಶಿಸ್ತು ಇರಬೇಕು. ಸೌಜನ್ಯಯುತವಾಗಿ ನಡೆಯುವ ಘನತೆ ಮತ್ತು ಗೌರವವಿರಬೇಕು. ಇಲ್ಲಿ ಸಂಘಟನೆ ಮುಖ್ಯ ಹೊರೆತು ವ್ಯಕ್ತಿಯಲ್ಲ. ಯಾರೇ ಆದರೂ ತನ್ನ ಹಿಡಿತದಲ್ಲಿರಬೇಕು ಎನ್ನುವುದರಿಂದ ಸಂಘಟನೆ ದಾರಿ ತಪ್ಪುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿದರು. ಸಂಘದ ನಿರ್ದೇಶಕ ಎನ್.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಮನೋಹರ ಗೌಡ, ವಿಶೇಷ ಆಹ್ವಾನಿತ ಜೆ.ಪದ್ಮನಾಭ, ರಾಷ್ಟ್ರೀಯ ಪತ್ರಿಕಾ ಮಂಡಳಿ ನಿರ್ದೇಶಕ ಭಂಡಿಗಡಿ ನಂಜುಂಡಪ್ಪ ಇದ್ದರು.