More

    ಡಿವೋರ್ಸ್ ಪಡೆಯಲು ವಾಮಮಾರ್ಗ, ಪತಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

    ಶಿವಮೊಗ್ಗ: ವಿವಾಹ ವಿಚ್ಛೇದನ ಪಡೆಯಲು ಮುಂದಾದ ಪತಿ ವಾಮಾಚಾರದ ಮೊರೆ ಹೋಗಿದ್ದು ನಗರದ ಗೋಪಾಳದಲ್ಲಿರುವ ಪತ್ನಿಯ ಮನೆ ಮುಂದೆ ನಿಂಬೆಹಣ್ಣು, ಕುಂಕುಮ, ಕೋಳಿ ತಲೆ ಮತ್ತು ಕಾಲುಗಳನ್ನಿಟ್ಟು ಹೋಗಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
    ವೈವಾಹಿಕ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಆದರೆ ಶಿಕ್ಷಕಿಯಾಗಿರುವ ಆತನ ಪತ್ನಿ ವಿಚ್ಛೇದನ ನೀಡಲು ನಿರಾಕರಿಸಿ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪತಿ ಮತ್ತು ಆತನ ಮನೆಯವರು ಎರಡೆರಡು ಬಾರಿ ವಾಮಾಚಾರ ಮಾಡಿಸಿದ್ದಾರೆ.
    30 ವರ್ಷದ ಸಂತ್ರಸ್ತೆ ತರೀಕೆರೆ ತಾಲೂಕಿನಲ್ಲಿ ಹಿಂದಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಗಂಡನಿಂದ ದೂರವಿದ್ದಾರೆ. ಆಕೆಗೆ ವಿಚ್ಛೇದನ ನೀಡಿ ಬೇರೊಂದು ಮದುವೆಯಾಗಲು ನಿರ್ಧರಿಸಿರುವ ಗಂಡ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಆತನೊಂದಿಗೆ ಸಂಸಾರ ನಡೆಸಲು ಅವಕಾಶ ಕಲ್ಪಿಸುವಂತೆ ಕೋರಿ ಪತ್ನಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.
    ಗಂಡನಿಗೆ ತಕ್ಷಣಕ್ಕೆ ವಿವಾಹ ವಿಚ್ಛೇದನ ಬೇಕಾಗಿದ್ದು ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ತಾನು ಕೆಲಸ ಮಾಡುವ ಶಾಲೆಯ ಸುತ್ತ ತಿರುಗುವುದಲ್ಲದೆ ಆರ್‌ಟಿಐ ಹಾಕಿ ಕೆಲ ಮಾಹಿತಿ ಪಡೆದಿದ್ದಾನೆ. ಜತೆಗೆ ಶಿಕ್ಷಕಿಯ ತಂದೆ ವಿರುದ್ಧವೂ ಆರ್‌ಟಿಐನಲ್ಲಿ ಅರ್ಜಿ ಹಾಕಿ ಅನೇಕ ವರ್ಷಗಳ ಹಿಂದೆ ನಡೆದಿದ್ದ ಪ್ರಕರಣವೊಂದರ ಬಗ್ಗೆ ಮಾಹಿತಿ ಮತ್ತು ದಾಖಲೆ ಸಂಗ್ರಹಿಸಿ ಡಿಡಿಪಿಐ ಮತ್ತು ಬಿಇಒಗೆ ನೀಡಿದ್ದಾರೆಂದು ಶಿಕ್ಷಕಿ ದೂರಿದ್ದಾರೆ.
    ಸೆ.27ರಂದು ಗೋಪಾಳದ ಶಿಕ್ಷಕಿ ಮನೆ ಮುಂದೆ ನಿಂಬೆಹಣ್ಣು, ಅರಶಿಣ, ಕುಂಕುಮ ಹಾಕಿ ಹೋಗಿದ್ದರು. ಅನುಮಾನಗೊಂಡು ಶಿಕ್ಷಕಿ ಮನೆಯವರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು. ಆದರೆ ಅಕ್ಟೋಬರ್ 24ರಂದು ಅಮಾವಾಸ್ಯೆಯ ದಿನ ಪತಿ ಮತ್ತು ಆತನ ಸಂಬಂಧಿಕರು ಮತ್ತೆ ಬಂದು ವಾಮಾಚಾರ ಮಾಡಿಸಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಾಮಾಚಾರದ ಮೂಲಕ ವಿವಾಹ ವಿಚ್ಛೇದನ ಪಡೆಯಲು ಯತ್ನಿಸಿರುವ ಪತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಕಿ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts