ಶಿವಮೊಗ್ಗ: 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಮುಷ್ಕರದಲ್ಲಿ ಭಾಗವಹಿಸಿರುವ ಕೆಎಸ್ಆರ್ಟಿಸಿ ನೌಕರರ ಮನವೊಲಿಕೆ ಪ್ರಯತ್ನ ಅಧಿಕಾರಿಗಳಿಂದ ನಡೆದಿದ್ದು ಗುರುವಾರ 15 ಬಸ್ಗಳು ರಸ್ತೆಗಿಳಿದವು.
ಮುಷ್ಕರದ ಮೊದಲ ದಿನ ಬುಧವಾರ ಒಂದೇ ಒಂದು ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದಿರಲ್ಲಿಲ್ಲ. ಆದರೆ ಗುರುವಾರ ದಾವಣಗೆರೆ, ಹೊನ್ನಾಳಿ, ಭದ್ರಾವತಿ, ಸಾಗರ ಹಾಗೂ ಶಿಕಾರಿಪುರಕ್ಕೆ ಸಾರಿಗೆ ಬಸ್ಗಳು ಸಂಚರಿಸಿದರು. ಈ ನಡುವೆ ಖಾಸಗಿ ಬಸ್ಗಳಿಗೂ ಅವಕಾಶ ಕಲ್ಪಿಸಿದ್ದ ಪರಿಣಾಮ ಜಿಲ್ಲೆಯಲ್ಲಿ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಲಿಲ್ಲ.
ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಸೇರಿ ನಾಲ್ಕು ನಿಗಮದ ಬಸ್ಗಳ ಮುಷ್ಕರದ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದಲೂ ಬಸ್ಗಳು ಶಿವಮೊಗ್ಗಕ್ಕೆ ಬುಧವಾರ ಬರಲಿಲ್ಲ. ಶಿವಮೊಗ್ಗದಿಂದಲೂ ದಾವಣಗೆರೆ ಹೊರತುಪಡಿಸಿ ಇತರೆ ಜಿಲ್ಲೆಗಳಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಇರಲಿಲ್ಲ. ಆದರೆ ಜಿಲ್ಲಾ ಕೇಂದ್ರದಿಂದ ಖಾಸಗಿ ಬಸ್ಗಳು ಪ್ರಯಾಣಿಕರನ್ನು ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಉತ್ತರ ಕನ್ನಡ, ಉಡುಪಿ, ಮಂಗಳೂರು ಸೇರಿ ಹೊರ ಜಿಲ್ಲೆಗಳಿಗೆ ಕರೆದೊಯ್ದವು.
ಶಿವಮೊಗ್ಗ ಘಟಕದಿಂದ 5 ಬಸ್ಗಳು, ಸಾಗರ ಘಟಕದಿಂದ 2 ಬಸ್ಗಳು, ಹೊನ್ನಾಳಿ ಘಟಕದಿಂದ 2 ಬಸ್ಗಳು ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದೊಯ್ದವು. ಇದೇವೇಳೆ ಖಾಸಗಿ ಬಸ್ಗಳಲ್ಲಿ ಎಂದಿನಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಆಟೋ, ಟ್ಯಾಕ್ಸಿ ಸೇವೆಯನ್ನು ಪ್ರಯಾಣಿಕರು ಬಳಸಿಕೊಂಡರು.