ಶಿವಮೊಗ್ಗ: ದೇಶಪ್ರೇಮಿ ಭಗತ್ಸಿಂಗ್ ಜನ್ಮದಿನದಂದೇ ಕೇಂದ್ರ ಸರ್ಕಾರ ರಾಷ್ಟ್ರದ್ರೋಹಿ ಸಂಘಟನೆ ಪಿಎಫ್ಐ ನಿಷೇಧ
ಮಾಡಿರುವುದನ್ನು ಇಡೀ ದೇಶವೇ ಸಂಭ್ರಮದಿಂದ ಸ್ವಾಗತಿಸುತ್ತದೆ. ಇದರಿಂದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೂ ಶಾಂತಿ
ಸಿಕ್ಕಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್ಐ ಸಂಘಟನೆ ರಾಷ್ಟ್ರದ್ರೋಹದ ಕೆಲಸ ಮಾಡುತ್ತಿದ್ದು, ಇದನ್ನು
ನಿಷೇಧಿಸಬೇಕೆಂದು ಬಿಜೆಪಿ ಹಲವು ಬಾರಿ ಮನವಿ ಮಾಡಿತ್ತು. ರಾಜ್ಯ ಸರ್ಕಾರದ ಮೂಲಕವೂ ಕೇಂದ್ರ ಸರ್ಕಾರಕ್ಕೆ ವರದಿಯ
ಮೂಲಕ ಸತ್ಯಾಂಶ ತಿಳಿಸಿತ್ತು. ಎಲ್ಲ ರಾಜ್ಯಗಳ ಅಭಿಪ್ರಾಯದಂತೆ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ಐ
ಸಂಘಟನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಧಿಕೃತವಾಗಿ ಬ್ಯಾನ್ ಮಾಡಿದ್ದಾರೆ ಎಂದರು.
ಪಿಎಫ್ಐ ದೇಶವಿರೋಧಿ ಚಟುವಟಿಕೆ ಜತೆಗೆ ಉಗ್ರರ ಜತೆ ಸಂಬಂಧ ಹೊಂದಿತ್ತು. ಹಲವು ಯುವಕರನ್ನು ದಾರಿ ತಪ್ಪಿಸಿತ್ತು.
ಪ್ರಮುಖವಾಗಿ ಹಿಂದು ಯುವಕರ ಹತ್ಯೆಯಲ್ಲಿ ಇವರ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಂತಹ ರಾಷ್ಟ್ರದ್ರೋಹಿ ಸಂಘಟನೆಯನ್ನು
ನಿಷೇಧಿಸಿರುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸ್ವಾಗತಿಸಬೇಕಾಗಿದೆ. ಅಷ್ಟೇ ಅಲ್ಲ, ರಾಷ್ಟ್ರ ಭಕ್ತ ಮುಸಲ್ಮಾನರು ಕೂಡ ಇದನ್ನು
ಒಪ್ಪಬೇಕು ಎಂದರು.
ಇನ್ನಾದರೂ ಮುಸ್ಲಿಂ ಹಿರಿಯರು ದಾರಿ ತಪ್ಪುತ್ತಿರುವ ಸಮುದಾಯದ ಯುವಕರಿಗೆ ಎಚ್ಚರಿಕೆ ನೀಡಬೇಕು. ರಾಜ್ಯ ಯುವ ಕಾಂಗ್ರೆಸ್
ಅಧ್ಯಕ್ಷ ಮೊಹಮ್ಮದ್ ನಲಪಾಡ್ನಂತಹ ಮೂರ್ಖ ಹೇಳಿಕೆ ನೀಡಿ ಇದಕ್ಕೆಲ್ಲ ನಿರುದ್ಯೋಗ ಕಾರಣವೆನ್ನುತ್ತಾರೆ. ಹಿಂದು ಯುವಕರು
ನಿರುದ್ಯೋಗಿಗಳಾಗಿಲ್ಲವೇ? ಅವರು ಎಂದಾದರೂ ಬಾಂಬ್ ತಯಾರಿಸಿದ್ದಾರೆಯೇ ಎಂದು ಪ್ರಶ್ನಿಸಿದರು.