ಶಿವಮೊಗ್ಗ: ಕರೊನಾ ಹಿನ್ನಲೆಯಲ್ಲಿ ಸತತ ಎರಡನೇ ವರ್ಷವೂ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಅತ್ಯಂತ ಸರಳವಾಗಿ ನೆರವೇರಿತು. ಹಿಂದೂ ಸಂಘಟನಾ ಮಹಾಮಂಡಳಿ ಪ್ರತಿಷ್ಠಾಪಿಸಿದ್ದ 77ನೇ ವರ್ಷದ ಹಿಂದೂ ಮಹಾಸಭಾ ಗಣಪತಿಯನ್ನು ರಾಜಬೀದಿ ಉತ್ಸವವಿಲ್ಲದೇ ಅನಂತ ಚತುರ್ದಶಿಯಂದು ಭಾನುವಾರ ಮಧ್ಯಾಹ್ನ ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.
ಶಿವಮೊಗ್ಗದ ಹಿಂದೂ ಸಂಘಟನಾ ಮಹಾಮಂಡಳಿ ಪದಾಧಿಕಾರಿಗಳ ತೀರ್ಮಾನದಂತೆ ಸರಳ ಆಚರಣೆ ಮತ್ತು ರಾಜಬೀದಿ ಉತ್ಸವ ನಡೆಸದೇ ಗಣಪತಿ ಮೂರ್ತಿಯ ವಿಸರ್ಜನೆ ಭಕ್ತಿ ಭಾವದಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಕೋಟೆ ರಸ್ತೆಯ ಭೀಮೇಶ್ವರ ದೇವಾಲಯದಲ್ಲಿ ಮೂರ್ತಿಗೆ ಸಂಪ್ರದಾಯ, ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಡಳಿ ಅಧ್ಯಕ್ಷ ಎಂ.ಕೆ. ಸುರೇಶ್ಕುಮಾರ್ ನೇತೃತ್ವದಲ್ಲಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ತುಂಗಾ ನದಿಯ ಭೀಮನ ಮಡುವಿನಲ್ಲಿ ಹರ್ಷೋದ್ಘಾರಗಳೊಂದಿಗೆ ವಿಸರ್ಜಿಸಲಾಯಿತು.
ಮಹಾಮಂಡಳಿ ಪದಾಧಿಕಾರಿಗಳಾದ ಶ್ರೀಧರರಾವ್ ಸರಾಫ್, ಎಸ್.ಎಂ.ದತ್ತಾತ್ರೇಯರಾವ್, ರಾಜಶೇಖರ ಅಲಸೆ, ಎ.ಎನ್. ಸತ್ಯನಾರಾಯಣ, ಶ್ರೀಪಾದರಾವ್, ನಿರಂಜನ, ಎಸ್.ಚೇತನ್, ಎಂ.ಆರ್.ಪ್ರಕಾಶ್, ಹರಿಗೆ ಗೋಪಾಲಸ್ವಾಮಿ, ಚಂದ್ರಶೇಖರ್, ಪಾಲಿಕೆ ಸದಸ್ಯ ಎಸ್.ಎನ್.ಚನ್ನಬಸಪ್ಪ, ಕೆಎಸ್ಎಸ್ಐಡಿಸಿ ಉಪಾಧ್ಯಕ್ಷ ಎಸ್.ದತ್ತಾತ್ರಿ, ದಿನದಯಾಳು ಮತ್ತಿತರರು ಪಾಲ್ಗೊಂಡಿದ್ದರು.