ಶಿಗ್ಗಾಂವಿ: ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರು ನಡೆದ ದಾರಿ ನಮಗಿಂದು ಹೆದ್ದಾರಿಯಾಗಿದೆ. ಅಂಥ ದಾರಿಯಲ್ಲಿ ನಡೆಯುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಬೇಕಿದೆ ಎಂದು ಮಾಜಿ ಸಂಸದ ಮಂಜುನಾಥ ಕುನ್ನೂರ ಹೇಳಿದರು.
ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಅವರ 154ನೇ ಜನ್ಮದಿನಾಚರಣೆ ಅಂಗವಾಗಿ ನಮ್ಮ ಸಂಸ್ಥೆಯಲ್ಲಿ ಗಾಂಧೀಜಿ ಹೆಸರಿನಲ್ಲಿ ಗುರುಕುಲ ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು.
ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಗಾಂಧೀಜಿ ಅವರ ವ್ಯಕ್ತಿತ್ವದಿಂದ ಭಾರತಕ್ಕೆ ವಿಶ್ವಗುರು ಮಾನ್ಯತೆ ಬಂದಿದೆ ಎಂದರು. ಸಂಸ್ಥೆ ನಿರ್ದೇಶಕ ವೀರಣ್ಣ ಬಡ್ಡಿ, ಜಿ.ಎಂ. ಅರಗೋಳ, ಎಂ.ಎ. ಗಾಣಿಗೇರ, ಎಂ.ಬಿ. ನೀರಲಗಿ, ಮಹೇಶ ಲಕ್ಷ್ಮೇಶ್ವರ, ಮುಂತಾದವರು ಇದ್ದರು.