ಸಿಂಧನೂರು: ರಾಜ್ಯ ಸರ್ಕಾರ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅನುಗ್ರಹ ಯೋಜನೆಯಡಿ ಸತ್ತ ಕುರಿ, ಮೇಕೆಗಳಿಗೆ ಪರಿಹಾರದ ಅರ್ಜಿ ಸ್ವೀಕರಿಸುವುದಿಲ್ಲವೆಂದು ಹೊರಡಿಸಿರುವ ಆದೇಶ ಹಿಂಪಡೆಯಬೇಕೆಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದರು. ರಾಜ್ಯದಲ್ಲಿ ಆಕಸ್ಮಿಕವಾಗಿ ಕುರಿ ಮತ್ತು ಮೇಕೆಗಳು ಸತ್ತರೆ ರ್ಸಾರ 5 ಸಾವಿರ ರೂ. ಪರಿಹಾರ ನೀಡುತ್ತಿತ್ತು. ಕುರಿ, ಮೇಕೆ ಸಾಕಣೆದಾರರಿಗೆ ಅನುಕೂಲವಾಗಿತ್ತು.
ಏ.15 ರಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅನುಗ್ರಹ ಯೋಜನೆಯಡಿ ಕುರಿ, ಮೇಕೆಗಳಿಗೆ ಪರಿಹಾರದ ಅರ್ಜಿ ಸ್ವೀಕರಿಸುವುದಿಲ್ಲವೆಂದು ಹೇಳಿ ಹೊರಡಿಸಿರುವ ಸುತ್ತೋಲೆಯಿಂದ ಕುರಿ ಸಾಕಣೆದಾರರಿಗೆ ಆತಂಕ ಮೂಡಿಸಿದೆ ಎಂದರು.
ಪಶು ಸಂಗೋಪನಾ ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹೊರಡಿಸಿರುವ ಆದೇಶ ಮುಖ್ಯಮಂತ್ರಿ ರದ್ದುಗೊಳಿಸಿ, ಬಾಕಿ ಅರ್ಜಿಗಳಿಗೆ ಪರಿಹಾರದ ಮೊತ್ತ ಬಿಡುಗಡೆ ಮಾಡಬೇಕು. ಪರಿಹಾರದ ಹಣವನ್ನು ಶೇ.50 ರಷ್ಟು ಹೆಚ್ಚಿಸಬೇಕು. ಸಪ್ಲಿಮೆಂಟರಿ ಬಜೆಟ್ನಲ್ಲಿ ಹಣಕಾಸು ನಿಗದಿಪಡಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಇತರರು ಇದ್ದರು.