ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೀಟರ್ ಮುಖರ್ಜಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ಹೀಗಿದ್ದರೂ ಪೀಟರ್ ಮುಖರ್ಜಿ ಜೈಲಿನಿಂದ ಸದ್ಯಕ್ಕೆ ಹೊರಬರಲು ಸಾಧ್ಯವಿಲ್ಲ.
ತಾನು ನೀಡಿರುವ ಜಾಮೀನು ತೀರ್ಪಿಗೆ ಬಾಂಬೆ ಹೈಕೋರ್ಟ್ ಆರು ವಾರಗಳ ಕಾಲ ತಡೆ ನೀಡಿದ್ದು, ಅಲ್ಲಿಯವರೆಗೆ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಬಹುದಾಗಿದೆ. ಶೀನಾ ಬೋರಾ ಪ್ರಕರಣದಲ್ಲಿ ಆರೋಪಿ ಪೀಟರ್ ಮುಖರ್ಜಿ ವಿರುದ್ಧ ಬಲವಾದ ಸಾಕ್ಷಿ ಇಲ್ಲದ ಕಾರಣದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಜೈಲು ವಾಸಿಯಾಗಿದ್ದ ಮುಖರ್ಜಿಗೆ ಹೈಕೋರ್ಟ್ ಜಾಮೀನು ನೀಡಿದೆ.
ಆರೋಪಿಯ ಆರೋಗ್ಯ ಸ್ಥಿತಿಯೂ ಕೂಡ ಜಾಮೀನು ನೀಡಲು ಕಾರಣವಾಗಿದೆ. ಅಲ್ಲದೆ, 2 ಲಕ್ಷ ರೂ. ಪಾವತಿಸುವಂತೆ ಕೋರ್ಟ್ ಆರೋಪಿಗೆ ಸೂಚಿಸಿದೆ. ಸದ್ಯ ಮಕ್ಕಳಾದ ರಾಹುಲ್ ಮತ್ತು ವಿಧಿ ಅವರನ್ನು ಸಂಪರ್ಕಿಸಲು ಪೀಟರ್ ಮುಖರ್ಜಿಗೆ ಕೋರ್ಟ್ ಅನುಮತಿಯನ್ನು ನೀಡಿಲ್ಲ.
ಶೀನಾ ಬೋರಾ ಕೊಲೆ ಪ್ರಕರಣವೇನು?
ಪೀಟರ್ ಮುಖರ್ಜಿ ಅವರು ಮಾಜಿ ಮಾಧ್ಯಮ ಕಾರ್ಯನಿರ್ವಾಹಕರು. ತಮ್ಮ ಮಾಜಿ ಪತ್ನಿ ಇಂದ್ರಾಣಿ ಮುಖರ್ಜಿ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಯಾಗಿದ್ದಾರೆ. 2012ರಲ್ಲಿ ಶೀನಾ ಬೋರಾ ಕೊಲೆಯಾಗಿತ್ತು. ಬಳಿಕ 2015ರಲ್ಲಿ ಪೀಟರ್ ಮುಖರ್ಜಿಯನ್ನು ಬಂಧಿಸಲಾಗಿತ್ತು.
ಕಳೆದ ವರ್ಷ ನವೆಂಬರ್ನಲ್ಲಿ ಜಾಮೀನು ಕೋರಿ ಪೀಟರ್ ಮುಖರ್ಜಿ ಸಿಬಿಐ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಸಿಬಿಐ ವಕೀಲರು ಪ್ರಕರಣ ಸಂಬಂಧ ಸಿಬಿಐ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಪೀಟರ್ಗೆ ಎಲ್ಲವೂ ಗೊತ್ತಿದೆ. ಪೀಟರ್ ಸೈಲೆಂಟ್ ಕಿಲ್ಲರ್ ಎಂದು ಹೇಳಿ, ಜಾಮೀನು ನೀಡಲು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊಲೆ ನಡೆದಾಗ ನಾನು ಭಾರತದಲ್ಲಿ ಇರಲೇ ಇಲ್ಲ ಎಂದು ಪೀಟರ್ ವಾದಿಸಿದ್ದರು.
ಇದೇ ಪ್ರಕರಣದಲ್ಲಿ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿಯವರನ್ನು 2015ರಲ್ಲಿ ಬಂಧಿಸಲಾಗಿದ್ದು, ಈ ಕ್ಷಣದವರೆಗೂ ಜೈಲು ವಾಸಿಯಾಗಿದ್ದಾರೆ. ಇವರೊಂದಿಗೆ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಪೀಟರ್ ಮುಖರ್ಜಿ ಕೂಡ ಬಂಧಿಸಲಾಗಿತ್ತು. ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ಸಿಬಿಐ ವಾದಿಸಿದೆ. (ಏಜೆನ್ಸೀಸ್)