ಮೂಡಿಗೆರೆ: ಊರುಬಗೆ ಗ್ರಾಮ ಪಂಚಾಯಿತಿ ಹೇರಿಕೆ ಗ್ರಾಮದ ಹರೀಶ್ ಎಂಬುವರ ಮನೆ ಪಕ್ಕದ ಶೆಡ್ಗೆ ಕಾಡಾನೆ ನುಗ್ಗಿ ಕಾರನ್ನು ಜಖಂಗೊಳಿಸಿದೆ.
ಮಂಗಳವಾರ ರಾತ್ರಿ ಮಳೆ ಸುರಿಯುತ್ತಿದ್ದಾಗ ಕಾಡಾನೆ ಬಂದು ಮನೆ ಪಕ್ಕದ ಕಾರ್ ಶೆಡ್ನ್ನು ಜಖಂಗೊಳಿಸಿದ್ದಲ್ಲದೆ ಶೆಡ್ನಲ್ಲಿದ್ದ ಕಾರಿನ ಹಿಂಭಾಗದ ಗಾಜನ್ನು ಪುಡಿಮಾಡಿದೆ. ಮೂಡಿಗೆರೆ ಅರಣ್ಯ ಇಲಾಖೆ ಆನೆ ಕಾರ್ಯಪಡೆ ಸಿಬ್ಬಂದಿ ಸ್ಥಳ ಪರಿಶೀಲಿಸಿದರು.
ಊರುಬಗೆ ಭಾಗದಲ್ಲಿ ಅನೇಕ ದಿನಗಳಿಂದ ಕಾಡಾನೆಗಳ ಹಿಂಡು ಸತತವಾಗಿ ಗ್ರಾಮದೊಳಗೆ ದಾಳಿಯಿಡುತ್ತಿವೆ. ರಸ್ತೆ, ಕಾಫಿ ತೋಟದಲ್ಲಿ ಓಡಾಡುತ್ತಿವೆ. ಇತ್ತೀಚೆಗೆ ಮೂಡಿಗೆರೆ ಕೊಲ್ಲಿಬೈಲ್ ಸಮೀಪದ ಸಿದ್ದಾರ್ಥ ವನದ ಬಳಿ ಕಾಡಾನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಬಸ್ ಬಳಿ ಬಂದು ಸ್ವಲ್ಪ ಹೊತ್ತು ರಸ್ತೆಯಲ್ಲಿಯೇ ನಿಂತು ಮತ್ತೆ ಕಾಫಿ ತೋಟಕ್ಕೆ ನುಸುಳಿ ಮರೆಯಾಗಿದೆ. ಕಾಡಾನೆ ರಸ್ತೆಗೆ ಬಂದ ವೇಳೆಗೆ ಸರಿಯಾಗಿ ಅದೇ ರಸ್ತೆಯಲ್ಲಿ ಕಾರಿನ ಪ್ರಯಾಣಿಕರು ಪಾರಾಗಿದ್ದಾರೆ. ಅದೃಷ್ಟವಶಾತ್ ಅಂದು ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಮಂಗಳವಾರ ಮತ್ತೆ ಹೇರಿಕೆ ಗ್ರಾಮಕ್ಕೆ ಬಂದಿರುವುದು ಸ್ಥಳೀಯರು ಭಯಗೊಂಡಿದ್ದಾರೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ.