ಶಿವಮೊಗ್ಗ: ಕುಟುಂಬದ ನಾಲ್ವರು ಹೆಣ್ಣುಮಕ್ಕಳ ಪೈಕಿ ಇವಳಾದರೂ ಸ್ನಾತಕೋತ್ತರ ಪದವಿ ಪಡೆಯಲಿ ಎಂದು ಹಂಬಲಿಸಿದ ಪಾಲಕರ ಕನಸನ್ನು ನನಸಾಗಿಸಿದ ಅಪ್ಪಟ ಗ್ರಾಮೀಣ ಪ್ರತಿಭಾವಂತೆ 11 ಚಿನ್ನದ ಪದಕ ಗಳಿಸಿ ಪಾಲಕರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ಭರತನಾಟ್ಯದಲ್ಲಿ ಸೀನಿಯರ್ ಪೂರೈಸಿದಾಕೆ ಓದಿನಲ್ಲೂ ಮುಂದು. ಕನ್ನಡ ಎಂಎ ಪರೀಕ್ಷೆಯಲ್ಲಿ ಆಕೆಗೆ ಲಭಿಸಿದ್ದು, 8 ಚಿನ್ನದ ಪದಕ.
ತಂದೆ ಕೆಲಸ ಮಾಡಿದ ವಿವಿಯ ಕ್ಯಾಂಪಸ್ನಲ್ಲೇ ವ್ಯಾಸಂಗ ಮಾಡಬೇಕೆಂದು ಕನಸು ಹೊತ್ತು ಬಂದ ಇಂಜಿನಿಯರಿಂಗ್ ಪದವೀಧರೆ ಎಂಬಿಎನಲ್ಲಿ ಪಡೆದಿದ್ದು ಆರು ಚಿನ್ನದ ಪದಕ. ಮದುವೆ ಬಳಿಕವೂ ಶಿಕ್ಷಣ ಮುಂದುವರಿಸಿ ಪತಿಯ ಆಶಯವನ್ನು ಈಡೇರಿಸಿದಾಕೆ ಈ ವಿದ್ಯಾರ್ಥಿನಿ. ಗುರುವಾರ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳ ಮೂಲಕ ಶೈಕ್ಷಣಿಕ ಸಾಧನೆಯ ಗರಿ ಮೂಡಿಸಿಕೊಂಡವರು ಸಾಧನಾ ಪಥವೇ ವಿಶಿಷ್ಠವಾಗಿದೆ.
137 ವಿದ್ಯಾರ್ಥಿಗಳು 259 ಪದಕಗಳನ್ನು ಹಂಚಿಕೊಂಡರೆ ವಿದ್ಯಾರ್ಥಿನಿಯರ ಓದಿಗೆ ಚಿನ್ನ ಒಲಿದದ್ದು ಹೆಚ್ಚಿನ ಸಂಖ್ಯೆಯಲ್ಲಿ. ಎರಡೂ ಘಟಿಕೋತ್ಸವಗಳಿಂದ ಒಟ್ಟು 220 ಮಂದಿ ಪಿಎಚ್.ಡಿ ಪದವಿ ಪಡೆದರೆ, 46,073 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದರು. ವಿವಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಎರಡು ಘಟಿಕೋತ್ಸವ ನಡೆದಿದ್ದು ಗಮನಸೆಳೆಯಿತು.
ಬೆಂಕಿಯಲ್ಲಿ ಅರಳಿದ ಚಿನ್ನದ ಹುಡುಗಿ:
ಈಕೆ ಎರಡೂ ಘಟಿಕೋತ್ಸವದ ಕೇಂದ್ರ ಬಿಂದು. ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಈಕೆಗೆ ಸಿಕ್ಕಿದ್ದು ಬರೋಬ್ಬರಿ 11 ಚಿನ್ನದ ಪದಕಗಳು. ಕಡುಬಡತನದಲ್ಲೇ ಹುಟ್ಟಿ ಬೆಳೆದು ಚಿನ್ನದ ಸಾಧನೆ ಮಾಡಿದಾಕೆಗೆ ಮುಂದೆ ಪೊಲೀಸ್ ಇಲಾಖೆಗೆ ಸೇರುವ ಬಯಕೆ. ತೀರ್ಥಹಳ್ಳಿ ತಾಲೂಕು ಹಣಗೆರೆಕಟ್ಟೆ ಸಮೀಪದ ಹುಲ್ಲಾನೆ ನಾಗರಾಜ್-ಭವಾನಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು. ಮೂರನೆಯವಳೇ ಎಚ್.ಎನ್.ದಿವ್ಯಾ. ನಾಗರಾಜ್ಗೆ ಇರುವುದು ಮುಕ್ಕಾಲು ಎಕರೆ ಅಡಕೆ ತೋಟ. ಇವರು ತೋಟದ ನಿರ್ವಹಣೆ ಮಾಡಿದರೆ ಪತ್ನಿ ಕೃಷಿ ಕೂಲಿ ಕಾರ್ಮಿಕರಾಗಿ ಕುಟುಂಬಕ್ಕೆ ಆಸರೆಯಾದವರು. ಮನೆಯಲ್ಲಿ ಯಾರೂ ಪದವಿ ಪಡೆದಿಲ್ಲ. ನೀನಾದರೂ ಆ ಸಾಧನೆ ಮಾಡು ಎಂದು ಈ ದಂಪತಿ ಮಗಳು ದಿವ್ಯಾಗೆ ಸ್ಪೂರ್ತಿ ತುಂಬಿದರು. ಅದೀಗ ಫಲ ನೀಡಿದೆ. ಪಾಲಕರ ಆಸೆಯಂತೆ ಪದವಿ ಸಾಧನೆ ಮಾತ್ರ ಅಲ್ಲ, ಚಿನ್ನದ ಪದಕದೊಂದಿಗೆ ಅವರ ಕನಸು ನನಸು ಮಾಡಿದ್ದಾರೆ.
ಪ್ರಾಥಮಿಕ ಶಿಕ್ಷಣವನ್ನು ಹಣಗೆರೆಯಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ಮಾಳೂರಿನಲ್ಲಿ ಪಡೆದ ದಿವ್ಯಾ ಪಿಯುಸಿ ಹಾಗೂ ಪದವಿಯನ್ನು ತೀರ್ಥಹಳ್ಳಿಯ ಹಾಸ್ಟೆಲ್ನಲ್ಲಿದ್ದು ಪೂರೈಸಿದರು. ಪಾಲಕರು ಹಾಗೂ ಅಕ್ಕಂದಿರ ಪ್ರೋತ್ಸಾಹವೇ ನನ್ನ ಸಾಧನೆಗೆ ಕಾರಣ. ಈಗ ನನ್ನಲ್ಲಿ ಸಂತೃಪ್ತ ಭಾವ ಉಂಟಾಗಿದೆ. ಮುಂದೆ ಪೊಲೀಸ್ ಅಧಿಕಾರಿಯಾಗಬೇಕು. ಅದಕ್ಕಾಗಿ ಪರೀಕ್ಷೆ ಬರೆಯುತ್ತೇನೆ ಎಂದು ದಿವ್ಯಾ ಹೇಳಿದರು. ಮಗಳು ರ್ಯಾಂಕ್ ಬರುತ್ತಾಳೆಂಬ ವಿಶ್ವಾಸವಿತ್ತು. ಆದರೆ 11 ಚಿನ್ನದ ಪದಕವನ್ನು ನಾನು ನಿರೀಕ್ಷಿಸಿರಲಿಲ್ಲ. ಆಕೆಯ ಮೇಲಿಟ್ಟ ಭರವಸೆ ಹುಸಿಯಾಗಿಲ್ಲ ಎಂದು ಮಗಳ ಸಾಧನೆಗೆ ಕಾಂತರಾಜ್ ಸಂತಸ ವ್ಯಕ್ತಪಡಿಸಿದರು.
ಭರತನಾಟ್ಯ ಪ್ರವೀಣೆಗೆ ಚಿನ್ನದ ಗರಿ:
ಸ್ನಾತಕೋತ್ತರ ಕನ್ನಡದಲ್ಲಿ ಅದ್ವಿತೀಯ ಸಾಧನೆ ತೋರಿ 31ನೇ ಘಟಿಕೋತ್ಸವದಲ್ಲಿ 8 ಚಿನ್ನದ ಪದಕ ಪಡೆದ ಕೊಪ್ಪ ತಾಲೂಕು ಹರಿಹರಪುರದ ಎಂ.ಟಿ.ಪ್ರಣೀತಾ ಭರತನಾಟ್ಯದಲ್ಲಿ ಸೀನಿಯರ್ ಮುಗಿಸಿದ್ದಾರೆ. ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ಎಂ.ಸಿ.ತಿಮ್ಮಪ್ಪ ಎಂಬುವವರ ಪುತ್ರಿಯಾದ ಈಕೆ, ವಿವಿಯಲ್ಲಿ ಸಿಕ್ಕ ಪ್ರೋತ್ಸಾಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನೆಂದೂ ವಿಪರೀತವಾಗಿ ಓದಲಿಲ್ಲ. ಕೆಲ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದೆ. 8 ಚಿನ್ನ ಖುಷಿ ಕೊಟ್ಟಿದೆ. ಮುಂದೆ ಪಿಎಚ್.ಡಿ ಮುಗಿಸಿ ಪ್ರಾಧ್ಯಾಪಕಿಯಾಗಬೇಕೆಂಬ ಕನಸು ನನ್ನದು ಎಂದು ಪ್ರಣೀತಾ ಮನದ ಇಂಗಿತ ವ್ಯಕ್ತಪಡಿಸಿದರು.
ಹೊನ್ನಾಳಿ ಹುಡುಗನ ಸಾಧನೆ:
ಹೊನ್ನಾಳಿ ತಾಲೂಕು ಕ್ಯಾಸಿನಕೆರೆಯ ಚಂದ್ರಪ್ಪ ಎಂಬ ಕೃಷಿಕರ ಪುತ್ರ ಯತೀಶ್ ಎಂಬಿಎ ವ್ಯಾಸಂಗ ಮಾಡಿ ಐದು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗೆ ಕೆಲವು ಉದ್ಯೋಗದ ಅವಕಾಶ ಅರಸಿ ಬಂದರೂ ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಾಗಿಲ್ಲ. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅಡಕೆ ತೋಟದ ನಿರ್ವಹಣೆ ನನ್ನ ಹೆಗಲೇರಿದೆ. ಮುಂದಿನ ದಿನಗಳಲ್ಲಿ ಕೃಷಿ ಇಲ್ಲವೇ ಎಂಬಿಎಗೆ ಸಂಬಂಧಿಸಿದ ಉದ್ಯೋಗ ಮಾಡುವ ಬಗ್ಗೆ ತೀರ್ಮಾನಿಸುತ್ತೇನೆ ಎನ್ನುತ್ತಾರೆ ಅವರು.
ರೈತನ ಮಗಳ ಉತ್ತಮ ಸಾಧನೆ:
ಜೈವಿಕ ತಂತ್ರಜ್ಞಾನದಲ್ಲಿ ಐದು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದ ಎಸ್.ಅನುಷಾ ಶಿವಮೊಗ್ಗ ತಾಲೂಕು ಕಾಚಿನಕಟ್ಟೆಯ ಕೃಷಿಕ ಶೇಖರಪ್ಪ ಅವರ ಪುತ್ರಿ. ಮೊದಲ ಸೆಮಿಸ್ಟರ್ ಸ್ವಲ್ಪ ಸುಲಭ ಎನಿಸಿತ್ತು. ಕೊನೆಯ ಸೆಮಿಸ್ಟರ್ ಕಷ್ಟವಾಗಿ ಪರಿಣಮಿಸಿತ್ತು. ಜೊತೆಗೆ ಹೆಚ್ಚಿನ ಸ್ಪರ್ಧೆಯಿತ್ತು. ಆದರೂ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮುಂದೆ ಪಿಎಚ್ಡಿ ಮಾಡುವ ಆಸೆಯಿದೆ ಎಂದು ಅನುಷಾ ಹೇಳಿದ್ದಾರೆ.
ಸಮಾಜಶಾಸ್ತ್ರದಲ್ಲಿ ಚಿನ್ನದ ಬೇಟೆ:
ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿ.ತನೂಷಾ ಶಿವಮೊಗ್ಗ ಅಶೋಕ ನಗರದ ಕೆಇಬಿ ಇಂಜಿನಿಯರ್ ಚಂದ್ರಪ್ಪ ಎಂಬುವವರ ಪುತ್ರಿ. ಮುಂದೆ ಸಮಾಜಶಾಸ್ತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡಬೇಕೆಂಬುದು ಇವರ ಬಯಕೆ ಹೊಂದಿದ್ದಾರೆ. ಪಾಲಕರ ಪ್ರೋತ್ಸಾಹವೇ ಸಾಧನೆಗೆ ಕಾರಣ ಎನ್ನುವ ತನೂಷಾ ಸಮಾಜಶಾಸ್ತ್ರದಲ್ಲಿ ವ್ಯಾಪಕ ಕಲಿಕೆಗೆ ಅವಕಾಶವಿದೆ ಎನ್ನುತ್ತಾರೆ.
ತಂದೆಯ ಆಸೆ-ಪತಿಯ ಕನಸು ಈಡೇರಿಸಿದಾಕೆ:
ಕುವೆಂಪು ವಿವಿಯಲ್ಲಿ ಸಹಾಯಕ ಲೈಬ್ರೇರಿಯನ್ ಆಗಿದ್ದ ತುಕಾರಾಂ ಅವರಿಗೆ ನನ್ನ ಇಬ್ಬರೂ ಮಕ್ಕಳು ಇಂಜಿನಿಯರಿಂಗ್ ಮಾಡಿದ್ದಾರೆ. ನಾನು ಕೆಲಸ ಮಾಡಿದ ವಿವಿ ಕ್ಯಾಂಪಸ್ನಲ್ಲಿ ಯಾರೂ ಓದಲೇ ಇಲ್ಲ ಎಂಬ ಕೊರಗಿತ್ತು. ತಂದೆಯ ನಿಧನದ ಬಳಿಕ ಜ್ಞಾನಸಹ್ಯಾದ್ರಿಯಲ್ಲಿ ಎಂಬಿಎಗೆ ಸೇರ್ಪಡೆಯಾದ ಟಿ.ಪ್ರಿಯಾಂಕ ಆರು ಚಿನ್ನದ ಪದಕದೊಂದಿಗೆ ತಂದೆಯ ಆಸೆ ಈಡೇರಿಸಿದ್ದಾರೆ. ಶಿವಮೊಗ್ಗ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ನಲ್ಲಿ ಪದವಿ ಪಡೆದಿದ್ದ ಪ್ರಿಯಾಂಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂಬಿಎಗೆ ದಾಖಲಾದ ಒಂದೇ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರಿಗೆ ಪತಿ ಭಾಸ್ಕರ್ ಸಹಕಾರವೂ ಸಿಕ್ಕಿತು. ಈಗ ತಂದೆಯ ಆಸೆ ಪತಿಯ ಕನಸೂ ಎರಡನ್ನೂ ಇವರು ಈಡೇರಿಸಿದ್ದಾರೆ.
ಕುವೆಂಪು ವಿವಿಯ 32ನೇ ಘಟಿಕೋತ್ಸವದಲ್ಲಿ 11 ಚಿನ್ನದ ಪದಕ ಪಡೆದ ಎಚ್.ಎನ್.ದಿವ್ಯಾ ಅವರು ಪಾಲಕರಾದ ನಾಗರಾಜ್, ಭವಾನಿ, ಹಿರಿಯ ಸಹೋದರಿ ಸುಪ್ರೀತಾ, ಬಾವ ಮಣಿಕಂಠ ಜತೆ ಸಂಭ್ರಮದ ಕ್ಷಣದಲ್ಲಿ ಕಾಣಿಸಿಕೊಂಡಿದ್ದು. ಕುವೆಂಪು ವಿವಿಯ 31 ಹಾಗೂ 32ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ರ್ಯಾಂಕ್ ಪಡೆದ ಸಿ.ತನೂಷಾ, ಕೆ.ಯು.ಯತೀಶ್, ಎಂ.ಟಿ.ಪ್ರಣೀತಾ, ಎಚ್.ಎನ್.ದಿವ್ಯಾ, ನಿವ್ಯಾ ಕೆ.ನಾಯಕ್, ಎಸ್.ಅನುಷಾ.