ಪಟ್ನಾ: ಬಿಹಾರದ ನಿವಾಸಿಯೊಬ್ಬ ತನ್ನ ಖಾತೆಗೆ ತಪ್ಪಾಗಿ ಜಮಾ ಆದ ಐದೂವರೆ ಲಕ್ಷ ರೂಪಾಯಿಗಳನ್ನು ಬ್ಯಾಂಕಿಗೆ ಹಿಂದುರುಗಿಸಲು ನಿರಾಕರಿಸಿದ್ದಾನೆ. ಆ ಹಣವನ್ನು ಪ್ರಧಾನಿ ಮೋದಿ ತನಗೆ ಕಳುಹಿಸಿದ್ದಾರೆಂದು ಭಾವಿಸಿ, ಪೂರ್ಣವಾಗಿ ಖರ್ಚು ಮಾಡಿಬಿಟ್ಟಿರುವುದಾಗಿ ಹೇಳುತ್ತಿದ್ದಾನೆ.
ಕಳೆದ ಮಾರ್ಚ್ನಲ್ಲಿ, ಬಿಹಾರದ ಖಾಗರಿಯ ಜಿಲ್ಲೆಯ ಗ್ರಾಮೀಣ ಬ್ಯಾಂಕು, ಭಕ್ತಿಯಾರ್ಪುರ ಗ್ರಾಮದ ನಿವಾಸಿ ರಂಜಿತ್ ದಾಸ್ ಖಾತೆಗೆ ತಪ್ಪಾಗಿ 5.5 ಲಕ್ಷ ರೂ.ಗಳನ್ನು ಜಮಾ ಮಾಡಿತ್ತು. ಆದರೆ ಈ ಬಗ್ಗೆ ಹಲವು ನೋಟೀಸುಗಳನ್ನು ನೀಡಿ ಹಣ ಹಿಂತಿರುಗಿಸುವಂತೆ ಕೇಳಿದರೂ, ಹಣವನ್ನೆಲ್ಲಾ ವ್ಯಯಿಸಿರುವುದಾಗಿ ದಾಸ್ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಮಾನಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದನ್ನೂ ಓದಿ: ಇದು ವಿಧಾನಸಭೆಯೋ.. ಪಾರ್ಲಿಮೆಂಟೋ..? ಸದನದಲ್ಲಿ ಸಿದ್ದರಾಮಯ್ಯಗೆ ಮಾಧುಸ್ವಾಮಿ ಪ್ರಶ್ನೆ!
ರಂಜಿತ್ ದಾಸ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು ಆತ ನೀಡಿದ ಸ್ಪಷ್ಟನೆ ಕೇಳಿ ದಂಗಾಗಿದ್ದಾರೆ. “ನನಗೆ ಹಣ ಬಂದಾಗ ನನಗೆ ತುಂಬಾ ಖುಷಿಯಾಯಿತು. ಪಿಎಂ ನರೇಂದ್ರ ಮೋದಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಯಲ್ಲೂ 15 ಲಕ್ಷ ರೂ. ಗಳನ್ನು ಜಮಾ ಮಾಡುವುದಾಗಿ ಹೇಳಿದ್ದರಲ್ಲ.. ಈ ಹಣ ಅದರ ಮೊದಲ ಕಂತು ಎಂದು ನಾನು ಭಾವಿಸಿದೆ. ಎಲ್ಲಾ ಹಣವನ್ನೂ ಖರ್ಚುಮಾಡಿಬಿಟ್ಟಿದ್ದೇನೆ. ಅದಕ್ಕಾಗೇ ಈಗ ನನ್ನ ಖಾತೆಯಲ್ಲಿ ಹಣವಿಲ್ಲ” ಎಂದಿದ್ದಾನೆ, ದಾಸ್.
ಆತ ಹಣವನ್ನು ನಿಜವಾಗಲೂ ಖರ್ಚು ಮಾಡಿದ್ದಾನೆಯೇ, ಇಲ್ಲವೇ ತನ್ನ ಬೇರೆ ಯಾವುದಾದರೂ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಜೆಇಇ ಮೇಯ್ನ್ ಫಲಿತಾಂಶ ಬಿಡುಗಡೆ: ಕರ್ನಾಟಕದ ವಿದ್ಯಾರ್ಥಿ ಸೇರಿದಂತೆ 18 ಮಂದಿಗೆ ಪ್ರಥಮ ರಾಂಕ್