More

    ಏಳು ಸೇತುವೆಗಳು ಜಲಾವೃತ

    ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶ ಹಾಗೂ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದಲ್ಲಿ ಕಳೆದ 24 ಗಂಟೆಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಬುಧವಾರ ಒಂದೇ ದಿನದಲ್ಲಿ 10 ಅಡಿಯಷ್ಟು ಏರಿಕೆ ಕಂಡು ಬಂದಿದೆ. ಹೀಗಾಗಿ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕೆಳಹಂತದ 7 ಸೇತುವೆಗಳು ಜಲಾವೃತಗೊಂಡಿವೆ.

    ಕೃಷ್ಣಾ ನದಿಗೆ ಸುಮಾರು 60 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಹೀಗಾಗಿ ದೂಧಗಂಗಾ, ವೇದಗಂಗಾ ಮತ್ತು ಕೃಷ್ಣಾ ನದಿಗೆ ಅಡ್ಡಲಾಗಿ ಇರುವ ಕೆಳ ಹಂತದ 7 ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ. ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ- ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ- ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ- ಹುನ್ನರಗಿ, ಕಾರದಗಾ- ಭೋಜ, ಭೋಜವಾಡಿ- ಕುನ್ನೂರ, ಜತ್ರಾಟ- ಭೀವಶಿ, ಸಿದ್ನಾಳ-ಅಕ್ಕೋಳ ಸೇರಿದಂತೆ ಕೆಳಹಂತದ 7 ಸೇತುವೆಗಳು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ನದಿ ತೀರದಲ್ಲಿ ಮತ್ತೆ ಪ್ರವಾಹ ಭೀತಿ ಉಂಟಾಗಿದೆ.

    ಮಳೆ ವಿವರ: ಮಹಾರಾಷ್ಟ್ರದ ಕೊಯ್ನ- 247 ಮಿ.ಮೀ, ವಾರಣಾ-140 ಮಿ.ಮೀ., ಕಾಳಮ್ಮಾವಾಡಿ- 227ಮಿ.ಮೀ., ನವಜಾ-300 ಮಿ.ಮೀ., ಮಹಾಬಲೇಶ್ವರ- 304 ಮಿ.ಮೀ., ರಾಧಾನಗರಿ- 281 ಮಿ.ಮೀ., ಪಾಟಗಾಂವ- 105 ಮಿ.ಮೀ., ಕೊಲ್ಲಾಪುರ-76 ಮಿ.ಮೀ., ಸಾಂಗಲಿ- 30 ಮಿ.ಮೀ. ಚಿಕ್ಕೋಡಿ- 33.6 ಮಿ.ಮೀ., ಸದಲಗಾ- 53.6 ಮಿ.ಮೀ., ಅಂಕಲಿ- 38.4 ಮಿ.ಮೀ., ಜೋಡಟ್ಟಿ- 13.5 ಮಿ.ಮೀ., ನಾಗರಮುನ್ನೋಳಿ- 14.6 ಮಿ.ಮೀ. ಮಳೆಯಾಗಿದೆ.

    ಬೋರಗಾಂವ ವರದಿ: ಧಾರಾಕಾರ ಮಳೆಯಿಂದ ಅಕ್ಕೋಳ-ಲಖನಾಪುರ ಹಳ್ಳದ ನೀರು ರಸ್ತೆ ಮೇಲೆ ಹರಿದ ಕಾರಣ ಕೆಲಕಾಲ ನಿಪ್ಪಾಣಿ-ಇಚಲಕರಂಜಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬೇಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀರು ನುಗ್ಗಿ ಸಮಸ್ಯೆಯಾಯಿತು. ಅಲ್ಲದೆ, ಬೇಡಕಿಹಾಳ- ಭೋಜ ರಸ್ತೆ ಮೇಲೆಯೂ ನೀರು ಹರಿಯುತ್ತಿದ್ದು, ಸಂಚಾರಕ್ಕೆ ತೊಡಕಾಗಿದೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಸಂಜಯ ನೇಮಣ್ಣವರ ಭೇಟಿ ನೀಡಿ ಪರಿಶೀಲಿಸಿದರು. ಬೇಡಕಿಹಾಳ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಶಾಂತಿನಗರದ ಶಾಲೆಯಲ್ಲಿ ಆಸ್ಪತ್ರೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts