ಬೆಂಗಳೂರು: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಕನ್ನಡ ಸೀರಿಯಲ್ಗಳ ಚಿತ್ರೀಕರಣವೀಗ ಮತ್ತೆ ಆರಂಭವಾಗಿದೆ. ಬಂದ್ ಆಗಿದ್ದ ಕ್ಯಾಮರಾ ಮತ್ತೆ ಆನ್ ಆಗಿದೆ. ಹಾಗಾಗಿ, ನಿಧಾನಗತಿಯಲ್ಲಿ ಸಾಗುತ್ತಿದ್ದ ಸಂಚಿಕೆಗಳು ಇನ್ನೇನು ಸೋಮವಾರದಿಂದ ಮುಂಚಿನ ವೇಗ ಪಡೆದುಕೊಳ್ಳಲಿವೆ!
ಕರ್ನಾಟಕದಲ್ಲಿ ಲಾಕ್ಡೌನ್ ಜಾರಿಯಲ್ಲಿರುವಾಗ ಶೂಟಿಂಗ್ ಹೇಗೆ ಸಾಧ್ಯ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಕರ್ನಾಟಕದಲ್ಲಿ ಅನುಮತಿ ಇಲ್ಲದಿದ್ದರೂ, ಪಕ್ಕದ ಹೈದರಾಬಾದ್ನಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ ಕನ್ನಡದ ಮನರಂಜನಾ ವಾಹಿನಿಗಳ ಕೆಲವು ಜನಪ್ರಿಯ ಧಾರಾವಾಹಿಗಳ ತಂಡಗಳು ಹೈದರಾಬಾದ್ನಲ್ಲಿ ಬಿಡಾರ ಹೂಡಿವೆ. ಕಳೆದೊಂದು ವಾರದಿಂದ ಸದ್ದಿಲ್ಲದೆ ಶೂಟಿಂಗ್ನಲ್ಲಿಯೂ ತೊಡಗಿಸಿಕೊಂಡಿವೆ. ‘ನನ್ನರಸಿ ರಾಧೆ’, ‘ಜೊತೆ ಜೊತೆಯಲಿ’, ‘ಕನ್ನಡತಿ’, ‘ನಮ್ಮನೆ ಯುವರಾಣಿ’, ‘ಸತ್ಯ’ ಹೀಗೆ ಇನ್ನೂ ಹಲವು ಧಾರಾವಾಹಿಗಳು ಶೂಟಿಂಗ್ ಸದ್ದಿಲ್ಲದೆ ನಡೆಯುತ್ತಿದೆ.
ಇನ್ನೂ ಕೆಲವು ತಂಡಗಳು ಶೀಘ್ರದಲ್ಲೇ ಹೈದರಾಬಾದ್ನ ವಿಮಾನ ಏರಲಿವೆ. ಕಲರ್ಸ್ ಕನ್ನಡದ ‘ಕನ್ನಡತಿ’ ಸೀರಿಯಲ್ ನಾಯಕಿ ರಂಜನಿ ರಾಘವನ್ ಸಹ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ‘ಮುಂದಿನ 10 ದಿನಗಳ ಕಾಲ ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯಲಿದೆ. ಚಿತ್ರೀಕರಣಕ್ಕೆ ಅವಶ್ಯಕವಿರುವ ಕಲಾವಿದರಷ್ಟೇ ಇಲ್ಲಿಗೆ ಬಂದಿದ್ದೇವೆ.
ನಮ್ಮ ವಾಹಿನಿಯ ಬೇರೆಬೇರೆ ಧಾರಾವಾಹಿ ತಂಡಗಳು ಸಹ ಇಲ್ಲಿವೆ. ಎಲ್ಲರೂ ಪ್ರತ್ಯೇಕವಾಗಿ ಚಿತ್ರೀಕರಿಸುತ್ತಿದ್ದಾರೆ. ಬೆಂಗಳೂರು ಸಹಜ ಸ್ಥಿತಿಗೆ ಬಂದ ಬಳಿಕವಷ್ಟೇ ಅಲ್ಲಿ ಚಿತ್ರೀಕರಣ ಮುಂದುವರೆಯಲಿದೆ’ ಎಂಬುದು ಅವರ ಮಾತು. ಈ ಬಗ್ಗೆ ಮಾಹಿತಿ ನೀಡುವ ‘ಜೊತೆ ಜೊತೆಯಲಿ’ ಖ್ಯಾತಿಯ ಅನಿರುದ್ಧ, ‘ಬೆಂಗಳೂರಿನಲ್ಲಿ ಶೂಟ್ ಮಾಡಿದ್ದ ಎಪಿಸೋಡ್ಗಳ ಬ್ಯಾಂಕಿಂಗ್ ಬಹುತೇಕ ಮುಗಿಯುತ್ತಾ ಬಂದಿರುವುದರಿಂದ, ನಾವು ಹೈದರಾಬಾದ್ಗೆ ಬಂದಿದ್ದೇವೆ. ಇಲ್ಲಿ ಚಿತ್ರೀಕರಣಕ್ಕೆ ಅನುಮತಿ ಇರುವುದರಿಂದ, ಇಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ನಾನು ಮತ್ತು ಧಾರಾವಾಹಿ ನಾಯಕಿ ಮೇಘ ಶೆಟ್ಟಿ ಇಬ್ಬರಷ್ಟೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇವೆ. ಸೀಮಿತ ಜನರನ್ನಿಟ್ಟುಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ’ ಎನ್ನುತ್ತಾರೆ.