ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಸುಪ್ರೀಂಕೋರ್ಟ್ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಅಭಿಷೇಕ್ ಮನು ಸಿಂಘ್ವಿ ಅವರ ಮಗ ಸೇರಿ, ಕುಟುಂಬದ ಇತರ ಸದಸ್ಯರಿಗೆ, ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗೂ ಕೊವಿಡ್-19 ಬಾಧಿಸುತ್ತಿದೆ.
ಸಿಂಘ್ವಿ ಅವರು ಮನೆಯಲ್ಲೇ ಐಸೋಲೇಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ತೀವ್ರ ತೊಂದೆಯೇನೂ ಕಾಣುತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಜ್ವರ ಬಾಧಿಸುತ್ತಿರುವುದರಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಜು.9ರವರೆಗೂ ಅವರಿಗೆ ಕ್ವಾರಂಟೈನ್ನಲ್ಲಿ ಇರಲು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಂಘ್ವಿ ಅವರಿಗೆ ಕೊವಿಡ್-19 ತಗುಲಿ ಈಗಾಗಲೇ ಐದಕ್ಕೂ ಹೆಚ್ಚು ದಿನಗಳು ಕಳೆದಿವೆ. ಜೂ.23ರಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣವೊಂದರ ವಾದ ಮಂಡನೆ ಮಾಡಿದ್ದರು.
ಸಿಂಘ್ವಿ ಅವರ ಪತ್ನಿಗೂ ಕೂಡ ಕೊವಿಡ್-19 ಸೋಂಕು ತಗುಲಿದ್ದು ಸಣ್ಣ ಪ್ರಮಾಣದ ಜ್ವರ ಇದೆ. ಅವರೂ ಸರ್ಕಾರದ ಮಾರ್ಗಸೂಚಿಯಂತೆ ಮನೆಯಲ್ಲೇ ಐಸೋಲೇಟ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ದೆಹಲಿಯಲ್ಲಿ ಹಲವು ನ್ಯಾಯಾಧೀಶರು, ವಕೀಲರು, ಕ್ಲರ್ಕ್ಗಳು, ಕೋರ್ಟ ಸಿಬ್ಬಂದಿ ಕೊವಿಡ್-19ನಿಂದ ಬಳಲುತ್ತಿದ್ದಾರೆ.
ಕಳೆದ ತಿಂಗಳು ನ್ಯಾಯಾಧೀಶರೋರ್ವವರ ಮನೆಯ ಅಡುಗೆಯವನಿಗೆ ಕೊವಿಡ್-19 ಪಾಸಿಟಿವ್ ಎಂದು ವರದಿ ಬಂದಿತ್ತು. ಹೀಗಾಗಿ ಆ ಜಡ್ಜ್ ಅವರ ಇಡೀ ಕುಟುಂಬ ಕ್ವಾರಂಟೈನ್ ಆಗಬೇಕಿತ್ತು. (ಏಜೆನ್ಸೀಸ್)