ಕುಶಾಲನಗರ: ಮಹಿಳೆಯರ ಜೀವನದ ಅತ್ಯಂತ ಸಂತಸ ಮತ್ತು ಸುಖ ನೀಡುವ ಕ್ಷಣ ಎಂದರೆ ಅದು ಗರ್ಭಿಣಿಯಾದಾಗ ಅನುಭವಿಸುವ ನೋವು ಮತ್ತು ನಲಿವು. ಆ ಸಂದರ್ಭದಲ್ಲಿ ಯಾವುದೇ ತರಹದ ಪೌಷ್ಟಿಕಾಂಶ ಕೂರತೆಯಾಗದ ರೀತಿ ಎಚ್ಚರವಹಿಸಬೇಕು ಎಂದು ಕುಶಾಲನಗರ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ನೇಹಾ ಜಗದೀಶ್ ತಿಳಿಸಿದರು.
ಕುಶಾಲನಗರ ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ಬ್ಯಾಡಗೋಟ್ ಮತ್ತು ಬಸವನಹಳ್ಳಿಯ 20 ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗರ್ಭಿಣಿಯಾದಾಗ ಮತ್ತು ಮಗು ಹುಟ್ಟಿದ ಕನಿಷ್ಠ 3 ತಿಂಗಳು ಹಿರಿಯರ ಸಲಹೆಯಂತೆ ಪಥ್ಯೆ ಇದ್ದರೆ ಜೀವನ ಪರ್ಯಂತ ಆರೋಗ್ಯವಾಗಿ ಇರಬಹುದು. ಆದ್ದರಿಂದ ಹಿರಿಯರ ಮತ್ತು ವೈದ್ಯರ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.
ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯ ಪ್ರತಿನಿಧಿಗಳು ಆದಿವಾಸಿ ಮಹಿಳೆಯರನ್ನು ಗುರುತಿಸಲು ಸಹಕಾರ ನೀಡಿ, ಉತ್ತಮ ಕಾರ್ಯಕ್ಕೆ ಜತೆಯಾಗಿದ್ದಾರೆ ಎಂದು ನೇಹಾ ಜಗದೀಶ್ ಶ್ಲಾಘಿಸಿದರು. ಕ್ಲಬ್ ಮಾಜಿ ಅಧ್ಯಕ್ಷರಾದ ರೇಖಾ ಗಂಗಾಧರ್, ರೂಪಾ ಉಮಾಶಂಕರ್, ಖಜಾಂಚಿ ಸುಪ್ರೀತಾ ರವಿ, ವಿವೇಕಾನಂದ ಯೂತ್ ಮೂವ್ಮೆಂಟ್ನ ಸುನೀತಾ, ಹೇಮಂತ್, ಕೃತಿ ಮತ್ತು ವೈಶಾಲಿ ಇತರರು ಉಪಸ್ಥಿತರಿದ್ದರು.