ವಿಜಯನಗರ: ಪಕ್ಷ-ಪಂಥ-ಸಿದ್ಧಾಂತಗಳ ಸಂಘರ್ಷದ ಹಿನ್ನೆಲೆಯಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಸೇರಿದಂತೆ 61 ಮಂದಿಯನ್ನು ಉಲ್ಲೇಖಿಸಿ ಮತ್ತೊಂದು ಬೆದರಿಕೆ ಪತ್ರ ಬಂದಿದೆ. ಆ ಮೂಲಕ ಒಂದು ವರ್ಗದ ಸಾಹಿತಿಗಳ ವಲಯದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ಉಂಟಾಗಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿರುವ ಸಾಹಿತಿ ಕುಂ. ವೀರಭದ್ರಪ್ಪ ಅವರ ಮನೆಗೆ ಈ ಪತ್ರ ಬಂದಿದೆ. ಪತ್ರದಲ್ಲಿ ಕುಂವೀ ಮಾತ್ರವಲ್ಲದೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿತ್ರನಟ ಪ್ರಕಾಶ್ ರೈ ಸೇರಿದಂತೆ 61 ಜನರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದೆ.
ಈ ಹಿಂದೆ ಬಂದಿದ್ದ ಬೆದರಿಕೆ ಪತ್ರದಲ್ಲೂ 60ಕ್ಕೂ ಅಧಿಕ ಜನರ ಹೆಸರನ್ನು ಉಲ್ಲೇಖಿಸಿ ಬೆದರಿಕೆ ಹಾಕಲಾಗಿದ್ದು, ಆ ಪತ್ರ ಭದ್ರಾವತಿಯಿಂದ ಪೋಸ್ಟ್ ಆಗಿತ್ತು. ಮೊದಲ ಪತ್ರ ಬಂದಾಗ ವಿಜಯನಗರ ಎಸ್ಪಿ ಡಾ. ಅರುಣ್ ಕೆ. ಅವರನ್ನು ಭೇಟಿಯಾಗಿದ್ದ ಕುಂವೀ, ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ಎರಡನೇ ಪತ್ರದಲ್ಲೂ 60ಕ್ಕೂ ಅಧಿಕ ಮಂದಿಗೆ ಬೆದರಿಕೆ ಒಡ್ಡಲಾಗಿದ್ದು, ಈ ಪತ್ರ ಚಿತ್ರದುರ್ಗದಿಂದ ಪೋಸ್ಟ್ ಮಾಡಲಾಗಿದೆ.
ಹಿಂದುಗಳ ವಿರುದ್ಧ ಮಾತನಾಡಿರುವ ನೀವೆಲ್ಲ ಹಿಂದುಗಳ ಕ್ಷಮೆ ಕೇಳಬೇಕು, ಇಲ್ಲವೇ ಸಾಯಲು ಸಿದ್ಧರಾಗಬೇಕು. ನೀವು ನಿಮ್ಮ ತಂಡ ಪೇಪರ್ ಟೈಗರ್, ನಾವಲ್ಲ ಎಂದು ಸಹಿಷ್ಣು ಹಿಂದು ಎಂಬ ಹೆಸರಿನಲ್ಲಿ ಆರು ಪುಟಗಳ ಬೆದರಿಕೆ ಪತ್ರ ಬರೆಯಲಾಗಿದೆ.
ಬಣ್ಣಬಣ್ಣದ ಡಿಸೈನ್ ಕಾರೊಳಗಿತ್ತು ಕೊಳೆತ ಶವ; 2 ವರ್ಷಗಳಿಂದ ಒಂದೇ ಕಡೆ ನಿಲ್ಲಿಸಲಾಗಿದ್ದ ಕಾರು!
ನಲಪಾಡ್ ಹಳೇ ಕೇಸ್ ಕೆದಕಿ ಕೆಣಕಿದ ನಟಿ ರಮ್ಯಾ; ಜಾಮೀನಿನ ಮೇಲಿರುವ ಅಧ್ಯಕ್ಷ ಎಂದು ವ್ಯಂಗ್ಯ..