ಮಂಗಳೂರು: ಇಲ್ಲಿನ ತಹಸೀಲ್ದಾರ್ ಕಚೇರಿಗೆ ಮಂಗಳವಾರ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು, ಲಂಚ ಪಡೆಯುತ್ತಿದ್ದ ದ್ವಿತೀಯ ದರ್ಜೆ ಸಹಾಯಕನನ್ನು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಆರ್ಆರ್ಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೊಹಮ್ಮದ್ ರಫೀಕ್(43) ಬಂಧಿತ ಆರೋಪಿ. ಜೋಕಟ್ಟೆಯ ಓಸ್ವಲ್ಡ್ ವೇಗಿಸ್(72) ಎಂಬುವರಿಂದ ಕಡತ ವರ್ಗಾಯಿಸಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಅಷ್ಟು ಹಣ ಇಲ್ಲ. ಕೆಲಸ ಮಾಡಿ ಕೊಡುವಂತೆ ಅವರು ಕೇಳಿಕೊಂಡಿದ್ದರು. ಕೊನೆಗೆ 40 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದ. ಬೇಸತ್ತ ವೇಗಿಸ್ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಮೊಹಮ್ಮದ್ ರಫೀಕ್ 40 ಸಾವಿರ ರೂ. ಪಡೆಯುತ್ತಿದ್ದಾಗ ಸಿದ್ಧವಾಗಿ ಬಂದಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎಸಿಬಿ ಎಸ್ಪಿ ಭೋಪಯ್ಯ ಹಾಗೂ ಡಿವೈಎಸ್ಪಿ ಪ್ರಕಾಶ್ ಕೆ.ಸಿ. ನಿರ್ದೇಶನದಲ್ಲಿ ಇನ್ಸ್ಪೆಕ್ಟರ್ಗಳಾದ ಶ್ಯಾಂ ಸುಂದರ್ ಎಚ್.ಎಂ. ಹಾಗೂ ಗುರುರಾಜ್, ಸಿಬಂದಿ ರಾಧಾಕೃಷ್ಣ, ಹರಿಪ್ರಸಾದ್, ಉಮೇಶ್, ರಾಜೇಶ್, ರಾಕೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.