ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಕುರಿತು ಇಂದು ನಡೆದ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾವಾರು ಕೋವಿಡ್ ನಿರ್ವಹಣೆ ಮಾಡುವ ನಿರ್ಧಾರ ಮಾಡಲಾಗಿದೆ. ಯಾವ ಜಿಲ್ಲೆಗಳಲ್ಲಿ ಕೋವಿಡ್ ಕಡಿಮೆ ಇದೆ, ಶೇಕಡ 2ಕ್ಕಿಂತ ಪಾಸಿಟಿವಿಟಿ ದರ ಕಡಿಮೆ ಇದೆಯೋ, ಅಲ್ಲಿ ಶಾಲೆ ಪ್ರಾರಂಭಿಸಬಹುದು ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ ಎಂದು ಘೋಷಿಸಿದರು.
ಒಂಭತ್ತರಿಂದ ಹನ್ನೆರಡನೇ ತರಗತಿವರೆಗೆ ಆಗಸ್ಟ್ 23 ರಿಂದ ತರಗತಿಗಳನ್ನು ಆರಂಭಿಸಲಾಗುವುದು. ಶಾಲೆ ಆರಂಭಿಸುವ ಬಗ್ಗೆ ಮಾರ್ಗಸೂಚಿ ಸಿದ್ಧವಿದೆ. ಶಾಲಾ ಶಿಕ್ಷಕರು ಮತ್ತು ಮಕ್ಕಳ ಪೋಷಕರಿಗೆ ಆದ್ಯತೆ ಮೇಲೆ ಲಸಿಕೆ ನೀಡುವ ಯೋಜನೆ ಹೊಂದಿದ್ದೇವೆ ಎಂದ ಸಿಎಂ ಬೊಮ್ಮಾಯಿ ಅವರು, ಪಾಸಿಟಿವಿಟಿ ದರ ಶೇ.ಎರಡಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿವುದು. ಒಂದು ಪಕ್ಷ ಪಾಸಿಟಿವಿಟಿ ಶೇ.2 ಕ್ಕಿಂತ ಹೆಚ್ಚಾದರೆ ಶಾಲೆ ನಿಲ್ಲಿಸುವುದು ಎಂಬ ಅಭಿಪ್ರಾಯ ಮೂಡಿಬಂದಿದೆ. ಪಾಸಿಟಿವಿಟಿ ದರ ಕಡಿಮೆ ಇದ್ದರೂ ಗಡಿ ಜಿಲ್ಲೆಗಳಲ್ಲಿ ತಾಲೂಕುಗಳ ಸ್ಥಿತಿಗತಿ ನೋಡಿಕೊಂಡು ಶಾಲೆ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ: ಶಾಲೆ ಇಲ್ಲದೆ ದುಡಿಮೆಗಿಳಿದ ಮಕ್ಕಳು!; ಡಿಸಿಎಸ್ಇಆರ್ಟಿ ಸಮೀಕ್ಷೆಯಲ್ಲಿ ಬಯಲಾದ ಆತಂಕಕಾರಿ ವಿಷಯ
ಕೋವಿಡ್ ನಿರ್ವಹಣೆಯ ಟಾಸ್ಕ್ ಫೋರ್ಸ್ ಜತೆ ವೈಜ್ಞಾನಿಕ ಅಂಶಗಳನ್ನು ಅಂಕಿಅಂಶಗಳ ಸಹಿತ ಚರ್ಚೆ ಮಾಡಲಾಯಿತು. ನೆರೆ ರಾಜ್ಯ, ವಿವಿಧ ದೇಶದ ಕೋವಿಡ್ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲಾಯಿತು. ತಜ್ಞರ ಅನುಭವ, ಮಾಹಿತಿ ಆಧರಿಸಿ, ಕೋವಿಡ್ ಎರಡನೇ ಅಲೆ ಇನ್ನೂ ಪೂರ್ಣವಾಗಿ ಹೋಗಿಲ್ಲ. ಅಲೆ ಕಡಿಮೆ ಆದರೂ ದಿನಕ್ಕೆ 1400 ರಿಂದ 1800 ಕೇಸ್ ಬರುತ್ತಿದೆ. ಆದ್ದರಿಂದ ಜಾಗೃತವಾಗಿರುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಬೊಮ್ಮಾಯಿ ಹೇಳಿದರು. (ಏಜೆನ್ಸೀಸ್)
ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧೆಗೆ ಮುಂದಾದ ಮಾಜಿ ಪೊಲೀಸ್ ಅಧಿಕಾರಿ!
ಮೂರು ಪಾಲಿಕೆ ‘ಕೈ’ವಶ ಮಾಡಿಕೊಳ್ಳುವ ಸಿದ್ಧತೆ ಶುರು