ಪಿರಿಯಾಪಟ್ಟಣ: ಪುರಸಭಾ ವ್ಯಾಪ್ತಿಯ ಅಬ್ಬೂರು ಗ್ರಾಮದಲ್ಲಿ ಶಕ್ತಿದೇವತೆ ಶ್ರೀದೇವಿ ಮಹಾಲಕ್ಷ್ಮೀ ಅಮ್ಮನವರ ಜಾತ್ರಾ ಮಹೋತ್ಸವ ಮಾ.21ರಿಂದ ಆರಂಭವಾಗಲಿದೆ.
ಆರು ದಿನಗಳ ಜಾತ್ರಾ ಮಹೋತ್ಸವ ಅಂಗವಾಗಿ ಮಹಾಲಕ್ಷ್ಮೀ ಸನ್ನಿಧಿಯಲ್ಲಿ ಮಾ.21 ರಂದು ಅಂಕುರಾರ್ಪಣೆ, ಧ್ವಜಾರೋಹಣ, 22 ರಂದು ಬೆಳಗ್ಗೆ 9.45 ರಿಂದ 11.40 ರಲ್ಲಿ ಸಲ್ಲುವ ಶುಭ ವೃಷಭ ಲಗ್ನದಲ್ಲಿ ರಾಜಬೀದಿ ಉತ್ಸವ, ಸಂಜೆ 6.30 ರಿಂದ 8.45 ರವರೆಗೆ ಕೊಂಡೋತ್ಸವ ನಡೆಯಲಿದೆ. 23ರಂದು ಬೆಳಗ್ಗೆ 9.45 ಕ್ಕೆ ಅಶ್ವಾರೋಹಣ, 24 ರಂದು ಅವಭೃತ ತೀರ್ಥಸ್ನಾನ, ಓಕುಳಿ ಪೂಜೆ, ವಸಂತೋತ್ಸವ, ಎತ್ತಿನ ಬಂಡಿ ಉತ್ಸವ ಏರ್ಪಡಿಸಲಾಗಿದೆ.
25 ರಂದು ಪಂಚೋಪಚಾರ ಸೇವೆ, ಉಯ್ಯಲೆ ಸೇವೆ, ರಾತ್ರಿ ದೀಪೋತ್ಸವ, ಮತ್ತು ಶಯನೋತ್ಸವ ಕಾರ್ಯಕ್ರಮ ನಡೆಯಲಿವೆ. 26 ರ ಮಂಗಳವಾರ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಗಜಾರೋಹಣ, ಸಂಗೀತ ಸೇವೆ ಮತ್ತಿತರ ಪೂಜಾ ಕೈಂಕರ್ಯಗಳು ನಡೆದು ಧ್ವಜ ಅವರೋಹಣದ ನಂತರ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನಿತ್ಯವೂ ಅನ್ನಸಂತರ್ಪಣೆ ಇರಲಿದ್ದು, ಸ್ವಇಚ್ಛೆಯಿಂದ ಅನ್ನಸಂತರ್ಪಣೆ ಮಾಡಬಹುದಾಗಿದೆ.