ಬೀದರ್: ಪೌರತ್ವ ಕಾಯ್ದೆ (ತಿದ್ದುಪಡಿ) ವಿರೋಧಿ ನಾಟಕ ಪ್ರದರ್ಶಿಸುವ ಮೂಲಕ ದೇಶದ್ರೋಹದ ಆರೋಪಕ್ಕೆ ಒಳಗಾಗಿದ್ದ ಬೀದರ್ನ ಶಾಲೆ ಇದೀಗ ಕರೊನಾ ವಾರಿಯರ್ ಆಗಿ ದೇಶ ಸೇವೆಯಲ್ಲಿ ತೊಡಗಿದೆ. ಬೀದರ್ ಜಿಲ್ಲೆಯಾದ್ಯಂತ ಇರುವ ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ಗಳನ್ನು ಸ್ಯಾನಿಟೈಸರ್ ಹಾಕಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅದು ತೊಡಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಶಾಹೀನ್ ಸ್ಕೂಲ್ನ ಆಡಳಿತ ಮಂಡಳಿ ಸದಸ್ಯರು, ಜಿಲ್ಲೆಯಾದ್ಯಂತ 250ಕ್ಕೂ ಹೆಚ್ಚು ಧಾರ್ಮಿಕ ಸ್ಥಳಗಳಿವೆ. ಲಾಕ್ಡೌನ್ ಅವಧಿಯಲ್ಲಿ ಇವೆಲ್ಲವೂ ಮುಚ್ಚಲ್ಪಟ್ಟಿದ್ದವು. ಇದೀಗ ಅನ್ಲಾಕ್ 1.0 ಜಾರಿಯಲ್ಲಿರುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವನ್ನು ಕರೊನಾ ಮುಕ್ತ ಪ್ರದೇಶವಾಗಿರಿಸುವ ಉದ್ದೇಶದಿಂದ ಅವೆಲ್ಲವನ್ನೂ ಸ್ಯಾನಿಟೈಸ್ ಮಾಡುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.
ಕಳೆದೊಂದು ವಾರದಿಂದ ತಮ್ಮ ಶಾಲೆಯ ವತಿಯಿಂದ 4 ಟ್ಯಾಂಕರ್ಗಳು ಧಾರ್ಮಿಕ ಕೇಂದ್ರಗಳ ಸ್ಯಾನಿಟೈಸ್ ಕಾರ್ಯದಲ್ಲಿ ತೊಡಗಿವೆ. ಇದುವರೆಗೂ 100ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಶಾಹೀನ್ ಸ್ಕೂಲ್ನ ಸಿಇಒ ತೌಸೀಫ್ ಮಡಿಕೇರಿ ತಿಳಿಸಿದ್ದಾರೆ.
ಇದನ್ನೂ ಓದಿ: ಕರೊನಾ ಕರಾಮತ್ತು- ಹೃದ್ಯ ಕ್ಷಣಕ್ಕೆ ಸಾಕ್ಷಿಯಾಗುವ ಭಾಗ್ಯ ಗಣಿನಾಡಿನದ್ದು!
ಶಾಲೆಯ ಈ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಬೀದರ್ನ ಪಾಂಡುರಂಗ ಮಂದಿರದ ಚಂದ್ರಶೇಖರ್ ಗಾಡಾ, ಜಿಲ್ಲೆಯನ್ನು ಕರೊನಾ ಮುಕ್ತಗೊಳಿಸುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿ ತೋರುತ್ತಿರುವ ಬದ್ಧತೆಗೆ ನಾವು ಮಾರುಹೋಗಿದ್ದೇವೆ. ಧಾರ್ಮಿಕ ಸೌಹಾರ್ದತೆ ಸಾರುವ ಇವರ ಕೆಲಸವನ್ನು ಮೆಚ್ಚಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ. ಮೆಥಾಡಿಸ್ಟ್ ಚರ್ಚ್ನ ಧಾರ್ಮಿಕ ಗುರು ಎಂ.ಪಿ. ಜೈಪಾಲ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.
ಸದ್ಯ ಶಾಲೆಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಶಾಲೆಯನ್ನು ಕ್ವಾರಂಟೈನ್ ಸೌಲಭ್ಯಕ್ಕಾಗಿ ಬಳಸಿಕೊಳ್ಳುತ್ತಿದೆ. ಸದ್ಯ ಇದಲ್ಲಿ ಅಂದಾಜು 500 ಜನರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ಪೌರತ್ವ ಕಾಯ್ದೆ (ತಿದ್ದುಪಡಿ) ಪ್ರತಿಭಟನೆಗಳು ತಾರಕದಲ್ಲಿ ಇದ್ದ ಸಂದರ್ಭದಲ್ಲಿ ಈ ಶಾಲೆಯ ಮಕ್ಕಳು ಈ ವರ್ಷದ ಜನವರಿಯಲ್ಲಿ ಸಿಎಎ ವಿರೋಧಿ ನಾಟಕವನ್ನು ಪ್ರದರ್ಶಿಸಿದ್ದರು. ಅಲ್ಲದೆ, 6ನೇ ತರಗತಿಯ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವ ಡೈಲಾಗ್ ಹೇಳಿದ್ದಳು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ತಾಯಿ ಮತ್ತು ಶಾಲೆಯ ಅಧ್ಯಕ್ಷ ಸೇರಿ ಆಡಳಿತ ಮಂಡಳಿ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಎಸ್ಐ ಹುದ್ದೆ ಸಿಕ್ಕರೂ ಕಾನ್ಸ್ಟೆಬಲ್ ಆಗಿರೋದೆ ವಾಸಿ ಅನ್ನೋ ನಿರ್ಧಾರಕ್ಕೇ ಅಂಟಿಕೊಂಡ್ರು!