ಬೆಂಗಳೂರು: ಪರಿಶಿಷ್ಟ ಜಾತಿ-ಪಂಗಡಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ಕಾಯ್ದೆ 1978ರ ಆದೇಶಕ್ಕೆ ಧಕ್ಕೆ ಆಗದಂತೆ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇತ್ಯರ್ಥ ಪಡಿಸುವಂತೆ ಸಕ್ಷಮ ಪ್ರಾಧಿಕಾರಕ್ಕೆ ಸರ್ಕಾರ ಸೂಚನೆ ನೀಡಿದೆ.
ಎಸ್ಸಿ-ಎಸ್ಟಿ ಜನರ ಜೀವನಮಟ್ಟ ಸುಧಾರಿಸುವ ಮತ್ತು ಭೂರಹಿತರಾಗುವುದನ್ನು ತಪ್ಪಿಸುವ ಧ್ಯೇಯೋದ್ದೇಶದಿಂದ ಕಾಯ್ದೆ ಜಾರಿಗೆ ತರಲಾಗಿದೆ. ಆದ್ದರಿಂದ ಕಾನೂನು ಇಲಾಖೆಯ ಅಭಿಪ್ರಾಯದಂತೆ ಸಕ್ಷಮ ಪ್ರಾಧಿಕಾರಗಳು ಎಸ್ಸಿ-ಎಸ್ಟಿ ಕಾಯ್ದೆ 1978ರಡಿ ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಪ್ರತಿ ಸಂದರ್ಭಗಳನ್ನು ಪರಿಗಣಿಸಬೇಕು. ಕಾಯ್ದೆ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಎಸ್ಸಿ-ಎಸ್ಟಿ ಜನರು ಭೂರಹಿತರಾಗದೇ ಇರುವುದನ್ನು ಗಮನದಲ್ಲಿಟ್ಟುಕೊಂಡು ಇತ್ಯರ್ಥಪಡಿಸಬೇಕು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಕಾಯ್ದೆ ಅನ್ವಯ ಸಕ್ಷಮ ಪ್ರಾಧಿಕಾರಿ, ಪ್ರಕರಣಗಳನ್ನು ಇತ್ಯರ್ಥಪಡಿಸುವಾಗ ಆದೇಶ ಉಲ್ಲೇಖಿಸಿ ಮೂಲ ಉದ್ದೇಶದ ವಿರುದ್ಧವಾಗಿ ತೀರ್ಪು ಕೊಟ್ಟಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿ ಪರಭಾರೆ ಮಾಡಿರುವ ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸಲು ಅಥವಾ ಸಕ್ಷಮ ಪ್ರಾಧಿಕಾರಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಲು ಕಾಲಮಿತಿ ಇರುವುದಿಲ್ಲ ಎಂದು ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಇನ್ನು ಸಬ್ ರಿಜಿಸ್ಟ್ರಾರ್ ಕಚೇರಿ ರಾತ್ರಿ ವರೆಗೂ ಓಪನ್; ಉತ್ತಮ ಸೇವೆ ಒದಗಿಸಲು ಸಮಯ ವಿಸ್ತರಣೆ