ಹೊಸಪೇಟೆ/ಕಂಪ್ಲಿ: ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಎಸ್ಸಿ ಮೀಸಲು ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿ ಹೊಸಪೇಟೆ, ಕಂಪ್ಲಿಯಲ್ಲಿ ಅಸ್ಪಶ್ಯ ಸಮುದಾಯಗಳ ಒಕ್ಕೂಟ ಸೋಮವಾರ ಪ್ರತಿಭಟನೆ ನಡೆಸಿ ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಹೊಸಪೇಟೆಯಲ್ಲಿ ಶಿರಸ್ತೇದಾರ ರಮೇಶ್ಗೆ ಮನವಿ ಸಲ್ಲಿಸಿ ಮಾತನಾಡಿದ ಮಾದಿಗ ಸಮುದಾಯ ಅಧ್ಯಕ್ಷ ಎಂ.ಸಿ.ವೀರಸ್ವಾಮಿ, ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿಯೇ ಲಂಬಾಣಿ ಸೇರಿ ಇತರ ಸಮುದಾಯಗಳನ್ನು ಪರಿಶಿಷ್ಟ ಪಟ್ಟಿಯಿಂದ ಕೈಬಿಡಲು ಆದೇಶ ನೀಡಿದೆ. ಹೀಗಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕೋರ್ಟ್ ತೀರ್ಪನ್ನು ಗೌರವಿಸಿ ಮೀಸಲು ಪಟ್ಟಿಯಿಂದ ಕೈ ಬಿಡುವ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಜತೆಗೆ ಸುಪ್ರೀಂಕೋರ್ಟ್ಗೆ ಅನುಪಾಲನ ವರದಿ ಸಲ್ಲಿಸಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ವಿವಿಧ ಸಮುದಾಯಗಳ ಮುಖಂಡರಾದ ಗ್ಯಾನಪ್ಪ ಬಡಿಗೇರ, ಸಣ್ಣ ಈರಣ್ಣ, ಎಚ್.ಎಸ್.ವೆಂಕಪ್ಪ, ದೇವದಾಸ, ಬಿ.ಮಾರೆಣ್ಣ, ಎರ್ರಿಸ್ವಾಮಿ, ಶಿವಕುಮಾರ, ರಾಮಕೃಷ್ಣ ನಿಂಬಗಲ್, ಸಿ.ಕೆ.ಹನುಮಂತಪ್ಪ, ಶೇಷು, ಭರತ್ಕುಮಾರ್ ಸಿ.ಆರ್.ಸಂತೋಷ್, ಎ.ಬಸವರಾಜ, ಎಚ್.ಹುಲುಗಪ್ಪ, ಎಚ್.ಬಿ.ಶ್ರೀನಿವಾಸ್, ಉದಯ್ ಕುಮಾರ್, ವಿಜಯಕುಮಾರ್, ಮರಿದಾಸ್, ಆಂಜನೇಯ, ವೆಂಕಟೇಶ್ ಇತರರಿದ್ದರು.
ಕಂಪ್ಲಿಯಲ್ಲಿ ಅಸ್ಪಶ್ಯ ಜಾತಿಗಳ ಮಹಾಸಭಾದ ತಾಲೂಕು ಘಟಕ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಿತು. ಬಳಿಕ ಉಪತಹಸೀಲ್ದಾರ್ ಬಿ.ರವೀಂದ್ರಕುಮಾರ್ಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಎಚ್.ಬಸವ, ಎಚ್.ಯರ್ರಿಸ್ವಾಮಿ, ಎನ್.ಬುಜ್ಜಿಕುಮಾರ್, ರಾಜು, ಬಿ.ಚನ್ನಬಸವ, ಎಚ್.ಗುಂಡಪ್ಪ, ಸಣ್ಣಕ್ಕಿ ವಿರೂಪಾಕ್ಷಿ, ರಾಮಸ್ವಾಮಿ, ಎಂ.ಮಹೇಶ್, ಡಿ.ಆರ್.ಪಾಂಡುರಂಗ, ಕೃಷ್ಣ ಎಸ್.ಪೋಳ್ ಇತರರಿದ್ದರು.