ಚಾಮರಾಜನಗರ : ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎಂದು ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು.
ಕೊಳ್ಳೇಗಾಲ ಪಟ್ಟಣದ ಎಂಜಿಎಸ್ವಿ ಜೂನಿಯರ್ ಕಾಲೇಜು ಆವರಣದಲ್ಲಿ ಇತ್ತೀಚೆಗೆ ಕೌಹಲ-ಗಾಲವ ಕನ್ನಡಿಗರ ಸಂಘ ಆಯೋಜಿಸಿದ್ದ ನಮ್ಮೂರ ಕನ್ನಡ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇಂಗ್ಲಿಷ್ ವ್ಯಾಮೋಹ ಆವರಿಸುತ್ತಿದೆ. ಸಂಸ್ಕಾರ ಹಾಗೂ ಸತ್ವ ಭರಿತ ಶಿಕ್ಷಣ ಕನ್ನಡ ಮಾಧ್ಯಮದಿಂದ ಸಿಗುತ್ತದೆ. ಪಾಲಕರು ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಗೆ ಆಸಕ್ತಿ ತೋರಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು. ಈ ವೇಳೆ ಸಾಧಕರನ್ನು ಹಾಗೂ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳಿಸಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ಗುರುಗಳಾದ ಅಬ್ದುಲ್ ತವಾಬ್ ಹಜರತ್, ಫಾದರ್ ರೆವೆರೆಂಡ್ ಡಿ.ಜೋಶುವಾ ಪ್ರಸನ್ನ ಕುಮಾರ್, ಮಾಜಿ ಶಾಸಕ ಎಸ್.ಬಾಲರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದತ್ತೇಶ್ಕುಮಾರ್, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯ, ಡಿವೈಎಸ್ಪಿ ಸೋಮೇಗೌಡ, ಎಚ್.ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ, ಕೃಷ್ಣಸ್ವಾಮಿ, ಕೌಹಳ -ಗಾಲವ ಸಂಘದ ವಿನೋದ್ (ನಂದ), ಸಮೀ ಷರೀಪ್, ಮಂಜುನಾಥ್, ಮುಡಿಗುಂಡ ಮೂರ್ತಿ ಇತರರು ಇದ್ದರು.