ಬೆಂಗಳೂರು: ಆಗತಾನೆ ಕಣ್ಣುಬಿಟ್ಟ ನವಜಾತ ಹೆಣ್ಣು ಶಿಶುವನ್ನು ಸ್ಮಶಾನದಲ್ಲಿ ಎಸೆದುಹೋಗಿರುವ ಅಮಾನವೀಯ ಘಟನೆ ಯಲಹಂಕದ ಅಲ್ಲಾಳಸಂದ್ರದಲ್ಲಿ ನಡೆದಿದೆ.
ಜೂ.19ರ ಸಂಜೆ ಸ್ಮಶಾನದಲ್ಲಿ ಹೆಣ್ಣುಮಗುವನ್ನು ಯಾರೋ ಎಸೆದು ಹೋಗಿರುವ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಯಲಹಂಕ ನ್ಯೂಟೌನ್ ನಿವಾಸಿ, ಆಶಾ ಕಾರ್ಯಕರ್ತೆ ಮಮತಾ ಅವರು ಮಗು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿ ರಕ್ಷಿಸಿದ್ದಾರೆ. ಮಗು ಪತ್ತೆಯಾದ ಒಂದೂವರೆ ತಿಂಗಳ ಬಳಿಕ ಇದೀಗ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿರಿ ತಿಥಿ ಕಾರ್ಯ ಮುಗಿದ ನಂತರ ಬಂತು ಶವ, ಕೋವಿಡ್ ಆಸ್ಪತ್ರೆಯ ಮಹಾ ಯಡವಟ್ಟು!
ಸ್ಮಶಾನದಲ್ಲಿ 3 ದಿನದ ಹೆಣ್ಣು ಶಿಶು ಇರುವುದು ಗೊತ್ತಾಗುತ್ತಿದ್ದಂತೆ ಆಶಾ ಕಾರ್ಯಕರ್ತೆ ಮಮತಾ, ಈ ಬಗ್ಗೆ ಪೊಲೀಸರು ಮತ್ತು ಸಂಬಂಧಿಸಿದ ಮೇಲಧಿಕಾರಿಗಳಿಗೂ ವಿಚಾರ ತಿಳಿಸಿದ್ದರು. ನಂತರ ಅವರ ಸೂಚನೆಯಂತೆ ಶಿಶುವನ್ನು ಕೂಡಲೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಯಲಹಂಕದ ಶಾರದನಗರ ಅಂಗನವಾಡಿ ಶಿಕ್ಷಕಿ ಶಿವಕುಮಾರಿ ಶಿಶುವನ್ನು ಆರೈಕೆ ಮಾಡಿದ್ದರು. ಕರೊನಾಗೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದ್ದು, ಶಿಶು ಆರೋಗ್ಯವಾಗಿದೆ. ಇದೀಗ ಕೆ.ಆರ್.ಪುರದಲ್ಲಿರುವ ಶಿಶು ಮಂದಿರಕ್ಕೆ ಮಗುವನ್ನು ಕಳುಹಿಸಿಕೊಡಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ ಪರಿಣಾಮ ಶಿಶು ಪ್ರಾಣಪಾಯದಿಂದ ಪಾರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶುವಿನ ಜನನ ಮರೆ ಮಾಚುವ ಉದ್ದೇಶದಿಂದ ಹುಟ್ಟಿದ ಹೆಣ್ಣು ಮಗುವನ್ನು ಆರೋಪಿಗಳು ಸ್ಮಶಾನದಲ್ಲಿ ಬಿಟ್ಟು ಹೋಗಿರುವ ಸಾಧ್ಯತೆಗಳಿವೆ. ಸ್ಮಶಾನದ ಬಳಿ ಸಿಸಿಕ್ಯಾಮರಾ ಅಳವಡಿಸದ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಲವ್ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!