ಕಂಪ್ಲಿ: ಇಲ್ಲಿನ ತುಂಗಭದ್ರಾ ನದಿ ತಟದ ಸ್ಮಶಾನಕ್ಕೆ ಸೇತುವೆ, ಸುತ್ತ ತಡೆಗೋಡೆ ಸೇರಿ ಮೂಲ ಸೌಕರ್ಯ ಇಲ್ಲವಾಗಿದೆ. ಅಲ್ಲದೆ ಮಳೆಗಾಲದಲ್ಲಿ ನದಿಗೆ ಹೆಚ್ಚು ನೀರು ಬಿಟ್ಟಲ್ಲಿ ಜಲಾವೃತವಾಗಿ ಅವಾಂತರ ಸೃಷ್ಟಿಸಿ ಅಂತ್ಯಕ್ರಿಯೆ ನಡೆಸಲು ತೊಡಕುಂಟಾಗುತ್ತಿದೆ.
ಇಲ್ಲಿ ಮೃತದೇಹವನ್ನು ದಹಿಸುವ ಮತ್ತು ಹೂಳುವ ಎರಡು ಪದ್ಧತಿಗಳಿದ್ದು, ಅವರವರ ಸಂಪ್ರದಾಯ ಅನುಸರಿಸುತ್ತಾರೆ. ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಲ್ಲಿ ಮೃತದೇಹವನ್ನು ಕೊಪ್ಪರಿಗೆಯಲ್ಲಿ ಇಟ್ಟುಕೊಂಡು ಅಂತ್ಯಸಂಸ್ಕಾರಕ್ಕೆ ಬರಬೇಕಿದೆ. ಶವದೊಂದಿಗೆ ಶವವಾಹಕರು, ಕಿಚ್ಚು ಹಿಡಿಯುವವರು, ಪುರೋಹಿತರು ಸಹ ಅದರಲ್ಲೇ ಆಗಮಿಸಬೇಕು.
ಸ್ಮಶಾನ ರಸ್ತೆ ಜಲಾವೃತ
ನದಿಗೆ ನೀರು ಬಂದಾಗಲೆಲ್ಲ ಸ್ಮಶಾನ ರಸ್ತೆ ಜಲಾವೃತಗೊಳ್ಳುತ್ತದೆ. ಇದರಿಂದ ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ. ಸ್ಮಶಾನಕ್ಕೆ ಸೇತುವೆ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಮೇಲೆತ್ತರಿಸಿ ಅಭಿವೃದ್ಧಿಗೊಳಿಸಬೇಕು.
ಇದನ್ನೂ ಓದಿ: ಲವ್ ಮಾಡಿ ಸ್ಮಶಾನದಲ್ಲಿ ಅದ್ಧೂರಿಯಾಗಿ ವಿವಾಹವಾದ ಜೋಡಿ: ಮದುವೆಗೂ ಮಸಣದ ನಡುವಿದೆ ಸಂಬಂಧ..!
ನದಿ ತಟಕ್ಕೆ ತಡೆಗೋಡೆ ನಿರ್ಮಿಸಿ ಸ್ಮಶಾನ ರಸ್ತೆಗೆ ನೀರು ನುಗ್ಗದ ವ್ಯವಸ್ಥೆ ಕಲ್ಪಿಸಬೇಕು ಎಂದು ಪುರಸಭೆ, ಪಿಡಬ್ಲುೃಡಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷರಾದ ಅಯ್ಯೋದಿ ವೆಂಕಟೇಶ್, ಬಿ.ಸಿದ್ದಪ್ಪ, ಪಿ.ಬ್ರಹ್ಮಯ್ಯ, ಪ್ರಮುಖರಾದ ಗದ್ಗಿ ವಿರೂಪಾಕ್ಷಿ, ವೈ.ಉಮೇಶ್, ದಮ್ಮೂರು ವೀರೇಶ್, ಕಟ್ಟೆ ಮಾರೆಪ್ಪ, ಅದ್ದಪ್ಪ ನಾಗಲಾರೆಪ್ಪ ಒತ್ತಾಯಿಸಿದ್ದಾರೆ.
ಸ್ಮಶಾನಕ್ಕೆ ಸುರಕ್ಷಿತವಾಗಿ ತೆರಳಲು ಸೇತುವೆ ವ್ಯವಸ್ಥೆ ಕಲ್ಪಿಸಬೇಕು. ರುದ್ರಭೂಮಿ ಅಭಿವೃದ್ಧಿಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಗೌಸಿಯಾ ಬೇಗಂ
ತಹಸೀಲ್ದಾರ್, ಕಂಪ್ಲಿ
ಕಂಪ್ಲಿ ಕೋಟೆಯ ನದಿ ತಟದ ಸ್ಮಶಾನ ಅಭಿವೃದ್ಧಿಗಾಗಿ ಪುರಸಭೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು.
ಕೆ.ದುರುಗಣ್ಣ
ಪುರಸಭೆ ಮುಖ್ಯಾಧಿಕಾರಿ, ಕಂಪ್ಲಿ