ಮಂಡ್ಯ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಹೆಗ್ಗುರುತು ಹೊಂದಿರುವ ಧ್ವಜ ಸತ್ಯಾಗ್ರಹ ಸೌಧದ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾಳುಕೊಂಪೆಯಂತಾಗುತ್ತಿದೆ. ಈ ಬಗ್ಗೆ ಹಲವು ಹೋರಾಟ, ಮನವಿ ಕೊಟ್ಟರೂ ಕ್ಯಾರೆ ಎನ್ನುತ್ತಿಲ್ಲ. ಈ ನಡುವೆ ಬುಧವಾರ ಸಂಜೆ ಸೌಧಕ್ಕೆ ಆಗಮಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಸೌಧದ ಅವ್ಯವಸ್ಥೆ ಕಂಡು ತೀವ್ರ ಬೇಸರ ವ್ಯಕ್ತಪಡಿಸಿದಲ್ಲದೆ, ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್ ಅವರೊಂದಿಗೆ ಮೈಸೂರು ದಸರಾಗೆ ತೆರಳುವ ಮಾರ್ಗಮಧ್ಯೆ ಮದ್ದೂರು ಪಟ್ಟಣದ ಶಿವಪುರ ಧ್ವಜ ಸತ್ಯಾಗ್ರಹ ಸೌಧಕ್ಕೆ ಭೇಟಿ ನೀಡಿದರು. ಸಂಜೆಯಾದ ಕಾರಣ ದೀಪವಿಲ್ಲದೆ ಕಗ್ಗತ್ತಲು ಇರುವುದನ್ನು ಕಂಡ ಸಚಿವರು, ಅವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ನಡುವೆ ಸೌಧದ ಒಳಕ್ಕೆ ಹೋಗಲು ಮೊಬೈಲ್ಫೋನ್ ಬೆಳಕು ಹಾಗೂ ಕಾರಿನ ಹೆಡ್ಲೈಟ್ ಬಳಸಬೇಕಾಯಿತು. ಬಳಿಕ ಅಲ್ಲಿಯೇ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳಿಗೂ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮುಖಂಡರು ಸೌಧದ ಅಭಿವೃದ್ಧಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಸುನೀಲ್, ಶ್ವೇತಾ, ಮ.ನ.ಪ್ರಸನ್ನಕುಮಾರ್, ಧನಂಜಯ, ಮಧುಕುಮಾರ್, ಸ್ವಾಮಿ, ಸಿಂಧು, ಪೂರ್ಣಿಮಾ, ಶಿವಕುಮಾರ್, ಪ್ರಕಾಶ್, ಕೆಂಪಬೋರಯ್ಯ, ಗುರು ಮಲ್ಲೇಶ್, ರಾಮು ಇತರರಿದ್ದರು.
ಪಿಎಫ್ಐ ಬ್ಯಾನ್ ‘ಸೆಪ್ಟೆಂಬರ್ ಕ್ರಾಂತಿ’ ಎಂದು ಬಣ್ಣಿಸಿದ ಅಲೋಕ್ ಕುಮಾರ್; ಯಾಕೆ?