ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಾಗಿದೆ. ಒಂದೊಂದೇ ಕರಾಳ ವಿಚಾರ ಬಯಲಾಗುತ್ತಿದ್ದು ಇತ್ತೀಚೆಗೆ ಗೃಹ ಸಚಿವರ ಮನೆಯಲ್ಲಿ ಸ್ಯಾಂಟ್ರೋ ರವಿ ಹಣದ ಗಂಟು ಎಣಿಸುತ್ತಿದ್ದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು.
ಅದಾದ ಮೇಲೆ ತನ್ನ ಪ್ರಭಾವ ಬಳಸಿ ಈತ, ಇಬ್ಬರು ಮಹಿಳೆಯರ ಮೇಲೆ ಸುಳ್ಳು ಆರೋಪ ಹೊರಿಸಿ ಕೇಸ್ ದಾಖಲು ಮಾಡಿಸಿದ್ದ. ಪ್ರಕರಣ ದಾಖಲು ಮಾಡಿದ್ದ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ನನ್ನು ಅಮಾನತು ಮಾಡುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರೇ ಆದೇಶ ಹೊರಡಿಸಿದ್ದರು. ಇದೀಗ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸುವ ಮುನ್ನ, ಎಸಿಪಿ ಈ ಕೇಸ್ ದಾಖಲು ಮಾಡಬೇಡ ಎಂದಿದ್ದರಂತೆ!
ಇದನ್ನೂ ಓದಿ: ಸ್ಯಾಂಟ್ರೋ ರವಿ ಪರವಾಗಿ ಸುಳ್ಳು ದೂರು ದಾಖಲಿಸಿದ್ದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು
ಸ್ಯಾಂಟ್ರೋ ರವಿಯ ಹೆಂಡತಿ ಮತ್ತು ನಾದಿನಿ ವಿರುದ್ದ ದರೋಡೆ ಪ್ರಕರಣ ದಾಖಲು ಮಾಡುವಾಗ ಎಸಿಪಿ ಬೇಡ ಎಂದು ಸೂಚಿಸಿದ್ದರು. ಆದರೂ ಇಬ್ಬರನ್ನ ಇನ್ಸ್ಪೆಕ್ಟರ್ ಪ್ರವೀಣ್ ಬಂಧಿಸಿದ್ದ. ಇಬ್ಬರೂ ಮಹಿಳೆಯರನ್ನು ಬಂಧಿಸಿ ನ್ಯಾಯಾಲಯಕ್ಕೆ ಕೂಡ ಈ ಭೂಪ ಹಾಜರುಪಡಿಸಿದ್ದ. ಈತ, ಸ್ಯಾಂಟ್ರೋ ರವಿಗೆ ಸಂಬಂಧಿಸಿದ ಪ್ರಕಾಶ್ ಎನ್ನುವವರು ನಿಡಿದ ದೂರಿನ ಅನ್ವಯ ಕಾಟನ್ ಪಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡು ಹೆಂಡತಿ ಹಾಗೂ ನಾದಿನಿಯನ್ನ ವಶಕ್ಕೆ ಪಡೆದಿದ್ದ.
ಆದರೆ ಪ್ರಕರಣ ದಾಖಲು ಮಾಡುವ ಮುನ್ನ ಈ ಬಗ್ಗೆ ಮಾಹಿತಿ ಪಡೆದ ಎಸಿಪಿ ಗಿರಿ, ನೇರವಾಗಿ ಠಾಣೆಗೆ ಬಂದು ಇಬ್ಬರೂ ಮಹಿಳೆಯರನ್ನು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ದೂರಿನಲ್ಲಿ ಹೇಳಿದಂತೆ ನಡೆದ ಅಪರಾಧದಲ್ಲಿ ಮಹಿಳೆಯರ ಪಾತ್ರ ಇಲ್ಲದ ಕಾರಣ ಹೇಳಿಕೆ ಪಡೆದು ಕಳಿಸುವಂತೆ ಎಸಿಪಿ ಗಿರಿ ಸೂಚಿಸಿದ್ದರು. ಆದರೆ ಎಸಿಪಿ ಗಿರಿ ಅವರ ಮಾತಿಗೆ ಬೆಲೆ ಕೊಡದೇ ಮಾರನೇ ದಿನವೇ ಇಬ್ಬರನ್ನೂ ಇನ್ಸ್ಪೆಕ್ಟರ್ ಪ್ರವೀಣ್ ಬಂಧಿಸಿದ್ದ.
ಇದಾದ ಮಾರನೇ ದಿನವೇ ಪ್ರವೀಣ್ ವರ್ಗಾವಣೆ ಕೂಡ ಆಗಿತ್ತು. ಎಸಿಪಿ ಸೂಚನೆ ಕೊಟ್ಟರೂ ಬಂಧನ ಮಾಡಿದ್ದ ಇನ್ಸ್ಪೆಕ್ಟರ್ ಮೇಲೆ ಕ್ರಮ ತೆಗೆದುಕೊಂಡಿರಲಿಲ್ಲ. ಆದರೆ ಸದ್ಯ ಡಿಸಿಪಿ ವರದಿ ಬಳಿಕ ಇನ್ಸ್ಪೆಕ್ಟರ್ ಪ್ರವೀಣ್ನನ್ನು ಅಮಾನತು ಮಾಡಲಾಗಿದೆ.