ಮಂಗಳೂರು: ಕೋವಿಡ್ -19 ಸೋಂಕು ತೀವ್ರಗತಿಯಲ್ಲಿ ಹರಡುವುದನ್ನು ತಡೆಯಲು ಸಕಲ ಪ್ರಯತ್ನ ನಡೆಯುತ್ತಿದ್ದು, ಮಂಗಳೂರಿನಲ್ಲಿ ಶನಿವಾರದ ವೀಕೆಂಡ್ ಕರ್ಫ್ಯೂ ಸಂದರ್ಭ ವಾಹನಗಳ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.
ನಗರದ ಹೆಚ್ಚಿನ ಕಡೆ ಪೊಲೀಸರು ತಪಾಸಣೆ ನಡೆಸಿದ್ದು, ಅನಗತ್ಯ ಸಂಚಾರದ ವಾಹನಗಳನ್ನು ತಡೆದಿದ್ದಾರೆ. ಬೆಳಗ್ಗಿನ ಅವಧಿಯಲ್ಲಿ ಮಾತ್ರ ಅಂಗಡಿಗಳು, ಹಾಲಿನ ಡೇರಿ ತೆರೆದಿತ್ತು. 9 ಗಂಟೆ ನಂತರ ಅಂಗಡಿಗಳು ಬಂದ್ ಆದ ಕಾರಣ ಜನರ ಸಂಚಾರವೂ ವಿರಳವಾಗಿತ್ತು.
ಈ ಮಧ್ಯೆ ನಗರ ಪೊಲೀಸ್ ಕಮಿಷನರ್ ಕಚೇರಿ ಸಹಿತ ಕಮಿಷನರೆಟ್ ವ್ಯಾಪ್ತಿಯ 22 ಪೊಲೀಸ್ ಠಾಣೆಗಳನ್ನು ಉಚಿತವಾಗಿ ಸ್ಯಾನಿಟೈಸ್ ಮಾಡಲು ಮಂಗಳೂರಿನ ಹೌಸ್ ಕೀಪಿಂಗ್ ಸಂಸ್ಥೆ ಮುಂದೆ ಬಂದಿದೆ.
ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಅವರೊಂದಿಗಿನ ಮಾತುಕತೆ ಬಳಿಕ ಶನಿವಾರ ಕಮಿಷನರೆಟ್ ಕಚೇರಿಯನ್ನು ಸ್ಯಾನಿಟೈಸ್ ಮಾಡುವ ಮೂಲಕ ಚಾಲನೆ ನೀಡಲಾಯಿತು. ಕರೊನಾ ರೋಗ ಹರಡದಂತೆ ತಡೆಯುವಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರು ಮತ್ತು ಇಲಾಖೆ ಮೇಲಿನ ಅಭಿಮಾನದಿಂದ ಈ ಕೆಲಸ ಆರಂಭಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.