ಸಂಡೂರು: ಸಾಮಾನ್ಯ ಕಾರ್ಯಕರ್ತ ದೇಶದ ಪ್ರಧಾನಿ, ರಾಷ್ಟ್ರಪತಿ ಹುದ್ದೆಗೇರಬಹುದು ಎಂದಾದರೆ ಅದು ಬಿಜೆಪಿಯಲ್ಲಿ ಸಾಧ್ಯ ಎಂದು ಪಕ್ಷದ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜು ಹವಾಲ್ದಾರ್ ಹೇಳಿದ್ದಾರೆ.
ತೋರಣಗಲ್ನಲ್ಲಿ ಸೋಮವಾರ ನಡೆದ ಎಸ್ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ಇದೀಗ ನಾಶವಾಗುತ್ತಿರುವ ಪಕ್ಷ. ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತು, ಇದೀಗ ಕೇರಳದ ಹಾದಿ ಹಿಡಿದಿದ್ದಾರೆ. ನಾಲ್ಕು ಕೋಟಿ ಮನೆ ನಿರ್ಮಿಸಿ ಕೊಡುವ ಜತೆಗೆ 12 ಕೋಟಿ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅನಿಲಭಾಗ್ಯ ನೀಡಿದ್ದಾರೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಜನಪರ ಯೋಜನೆಗಳು ಬಡವರಿಗೆ ತಲುಪಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ, ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾದರು. ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆದರು. ಆದರೆ, ಅಧಿಕಾರದಲ್ಲಿ ಇಬೇಕೆಂದರೆ ಆಪರೇಷನ್ ಕಮಲದ ಅವಶ್ಯಕತೆಯಿತ್ತು. ದೇಶದಲ್ಲಿ ಪರಿವರ್ತನೆಯಾಗಬೇಕಿತ್ತು. ಕಾಶ್ಮೀರ, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಬೇಕಿತ್ತು. ರಷ್ಯಾ ಅಧ್ಯಕ್ಷರೆದುರು ಕೂತು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ ಏಕೈಕ ವ್ಯಕ್ತಿ ನರೇಂದ್ರ ಮೋದಿ. ವಿಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ. ಅದು ಕನಸಿನ ಮಾತು. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದೆ ಬಿಜೆಪಿ ಗುರಿ ಎಂದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದರು. ಅಷ್ಟೋತ್ತಿಗಾಗಲೇ ಉದ್ಘಾಟನಾ ಕಾರ್ಯಕ್ರಮ ಮುಗಿಸಿ, ಎಲ್ಲರೂ ಹೊರಗಡೆ ಬಂದಿದ್ದರು. ವಿಭಾಗೀಯ ಕಾರ್ಯದರ್ಶಿ ಸಿದ್ದೇಶ್ ಯಾದವ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿ ಗೌಡ, ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ, ಎಸ್ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎನ್.ಓಬಳೇಶ್, ತಾಲೂಕು ಅಧ್ಯಕ್ಷ ಪರಶುರಾಮ್ ಪೂಜಾರ್, ಪಾಲಿಕೆ ಮಾಜಿ ಸದಸ್ಯ ಕೆ.ದಿವಾಕರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉಡೇದ ಸುರೇಶ್, ಎಸ್ಸಿ ಮೋರ್ಚಾ ರಾಜ್ಯಸಮಿತಿ ಸದಸ್ಯ ಕುಮಾರನಾಯ್ಕ, ಪುರಸಭೆ ಸದಸ್ಯ ರಾಮಕೃಷ್ಣ, ಮುಖಂಡರಾದ ಚಂದ್ರಶೇಖರ್ ಹಲಗೇರಿ, ಮಂಜುನಾಥ ಒಲೇಕಾರ್, ಗಂಗಾಧರ ನಾಯಕ,ವೀರೇಶ್, ದರೋಜಿ ರಮೇಶ್ ಇತರರಿದ್ದರು.