ಸಂಡೂರು: ದತ್ತಿಗಳಿಂದ ಕನ್ನಡ ಹಿರಿಯರನ್ನು ಸ್ಮರಣೆ ಜತೆಗೆ ಕನ್ನಡ ಬೆಳೆಸುವ ಕಾರ್ಯವಾಗುತ್ತಿದೆ ಎಂದು ಯಶವಂತನಗರದ ದತ್ತಿದಾನಿ ಸಿ.ಮೃತ್ಯುಂಜಯಪ್ಪ ಹೇಳಿದರು.
ಕನ್ನಡ ಬೆಳೆಸುವ ಕಾರ್ಯವಾಗಲಿ
ಯಶವಂತನಗರ ಗ್ರಾಮದ ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದ ಹಮ್ಮಿಕೊಂಡಿದ್ದ ಕರಿಬಸಮ್ಮ ಮತ್ತು ಚಿತ್ರಿಕಿ ತೋಟಪ್ಪ ದತ್ತಿ ಹಾಗೂ ಮರಿಬಸಮ್ಮ ಕುರುಗೋಡಪ್ಪ ದತ್ತಿ ಉಪನ್ಯಾಸ ಹಾಗೂ ಚಿತ್ರಿಕಿ ತಿಪ್ಪಣ್ಣನವರ 10ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಪಾಲಕರ ಹೆಸರು ತರುವ ಸಾಮಾಜಿಕ ಕಾರ್ಯಗಳನ್ನು ಮಾಡಲಿ ಎಂದರು.
ಅಲ್ಲಮಪ್ರಭು ಅವರು ಕೆರೆಗಳನ್ನು ಕಟ್ಟಿಸುವುದು, ಬಾವಿಗಳ ನಿರ್ಮಾಣ, ಸಾಮೂಹಿಕ ವಿವಾಹದಂತಹ ಕಾರ್ಯಗಳನ್ನು ಮಾಡಿದರು. ಹಾಗಾಗಿ ಅವರ ದೂರದೃಷ್ಟಿಯನ್ನು ಅರಿತುಕೊಂಡು ಬಸವಣ್ಣ ಕಲ್ಯಾಣಕ್ಕೆ ಕರೆ ತಂದರು ಎಂದರು. ಸಂಡೂರಿನ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, 12ನೇ ಶತಮಾನದ ಶರಣರ ಮೇಲೆ ರಾಮಾನುಜಾಚಾರ್ಯರ ಪ್ರಭಾವ ವಿರುವುದು ಕಂಡು ಬರುತ್ತದೆ. ಅಂತಹ ಪ್ರಭಾವ, ಸೊನ್ನಲಿಗೆ ಸಿದ್ದರಾಮೇಶ್ವರರ ಬದುಕಿನಲ್ಲಿ ಎರಡು ಪ್ರಮುಖ ಘಟ್ಟಗಳು ಪೂರ್ವಾಶ್ರಮದಲ್ಲಿ ಇದ್ದ ಚಿಂತನೆ ಬೇರೆ, ಶರಣರ ಸಂಘದಿಂದ ಅವರು ಬದಲಾದ ಸ್ಥಿತಿ ಬೇರೆ. ಸ್ಥಾವರ ಲಿಂಗಮಾಡಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನವನ್ನು ಸೊನ್ನಲಿಗೆಯಲ್ಲಿ ಕಟ್ಟಸಿ ಮುಕ್ತಿ ಪಡೆದರು. ಶರಣ ಸಂಘದಿಂದ ಇಡೀ ದೇವಸ್ಥಾನದ ಸಂಸ್ಕೃತಿಯನ್ನೇ ತಿರಸ್ಕರಿಸಿ ಆತ್ಮ ಲಿಂಗವನ್ನು ಪಡೆದು ಅದರ ಮೂಲಕ ಪರಿವರ್ತನೆಯಾದರು ಎಂದರು.
ಯಶವಂತನಗರದ ಸಿದ್ದರಾಮೇಶ್ವರ ಸ್ವಾಮೀಜಿ, ಬಿ.ಬಣಕಾರ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಚಿತ್ರಿಕಿ ಸುಮಂಗಳಮ್ಮ, ಸಿ.ಕೆ.ವಿಶ್ವನಾಥ, ಸಿ.ಮಹಾಬಲಿ, ಬಸವರಾಜ ಮಸೂತಿ, ಎ.ಎಂ.ಶಿವಮೂರ್ತಿಸ್ವಾಮಿ ಇತರರಿದ್ದರು.
ಗಾಣಿಗರ ವಿರೇಶ್, ಕುರುಗೋಡಪ್ಪ, ಶಿಕ್ಷಕ ಕೊಟ್ರೇಶ್ ನಿರ್ವಹಿಸಿದರು. ಟಿ.ವೆಂಕಟೇಶ್, ಹೆಚ್.ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.