ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮೃತದೇಹ ಇರುವ ಜಯನಗರದ ಅಪೋಲೋ ಆಸ್ಪತ್ರೆಗೆ ಸ್ಯಾಂಡಲ್ವುಡ್ನ ಕಲಾವಿದರು ಒಬ್ಬೊಬ್ಬರಾಗಿ ಆಗಮಿಸಿ, ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಹಿರಿಯ ನಟಿಯರಾದ ಸುಮಲತಾ, ತಾರಾ ಅವರು ಭೇಟಿ ಕೊಟ್ಟಿದ್ದಾರೆ. ತಾರಾ ಅವರಂತೂ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಚಿರುಗೆ ಹೃದಯಾಘಾತವೆಂದು ಒಂದು ವಾಹಿನಿಯಲ್ಲಿ ನೋಡಿದೆ. ಮೊದಲು ಇದು ಫೇಕ್ ನ್ಯೂಸ್ ಎಂದುಕೊಂಡೆ. ಆದರೆ ಸತ್ಯವಾಗಿಹೋಯಿತು ಎಂದು ಕಣ್ಣಲ್ಲಿ ನೀರು ಹಾಕಿದರು. ಇದನ್ನೂ ಓದಿ: ಮಧ್ಯಾಹ್ನ ಊಟ ಮಾಡುತ್ತಿದ್ದ ಚಿರುಗೆ ದಿಢೀರ್ ಕಾಣಿಸಿಕೊಂಡಿತ್ತು ಎದೆನೋವು…
ಸುಮಲತಾ ಅಂಬರೀಷ್ ಅವರು ತುಂಬ ಗದ್ಗದಿತರಾಗಿದ್ದರು. ಚಿರಂಜೀವಿಗೆ ಅಂಬರೀಷ್ ಎಂದರೆ ತುಂಬ ಪ್ರೀತಿಯಾಗಿತ್ತು. ಅವರ ಆರೋಗ್ಯದಲ್ಲಿ ಸ್ವಲ್ಪವೇ ಹೆಚ್ಚುಕಡಿಮೆಯಾದರೂ ಓಡಿಬರುತ್ತಿದ್ದರು. ಈಗ ಅವರಿಲ್ಲ ಎನ್ನುವುದನ್ನು ನಂಬಲೇ ಸಾಧ್ಯವಾಗುತ್ತಿಲ್ಲ. ಆ ಚಿಕ್ಕ ಹುಡುಗಿ ಮೇಘನಾಳನ್ನು ನೆನೆಸಿಕೊಂಡರೆ ತುಂಬ ದುಃಖವಾಗುತ್ತದೆ. ಇಂದು ತುಂಬ ಕೆಟ್ಟದಿನ ಎಂದು ಭಾವುಕರಾಗಿ ಹೇಳಿದರು.
ಆಸ್ಪತ್ರೆಗೆ ಆಗಮಿಸಿ ಮಾತನಾಡಿದ ನಟ ಶಿವರಾಜ್ ಕುಮಾರ್ ಅವರು, ನಾನು ಮಧ್ಯಾಹ್ನ ಮಲಗಿದ್ದೆ. ಎದ್ದ ತಕ್ಷಣ ನ್ಯೂಸ್ ನೋಡಿ ಶಾಕ್ ಆಯಿತು. ನೋವು, ಸಂಕಟ ಎಲ್ಲವೂ ಒಟ್ಟಿಗೇ ಆಯಿತು. ಚಿರು ಒಳ್ಳೆಯ ನಟ. ಅದಕ್ಕಿಂತ ಹೆಚ್ಚಾಗಿ ತುಂಬ ಒಳ್ಳೆಯ ವ್ಯಕ್ತಿ, ಸ್ವಲ್ಪವೂ ಜಂಭವಿಲ್ಲ. ಎಲ್ಲರ ಜತೆಗೂ ಹೊಂದಿಕೊಳ್ಳುತ್ತಿದ್ದ. ಅವನ ಪತ್ನಿ ಮೇಘನಾಗೆ ಇನ್ನೂ ಚಿಕ್ಕವಯಸ್ಸು. ಅವಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ. ಒಬ್ಬ ತಮ್ಮನನ್ನು ಕಳೆದುಕೊಂಡಷ್ಟು ನೋವಾಗುತ್ತಿದೆ ಎಂದರು.ಇದನ್ನೂ ಓದಿ: ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಸಾವು
ಮೊದಲು ಒಂದಿಬ್ಬರು ಫೋನ್ ಮಾಡಿದರು. ಏನಿದು ಎಲ್ಲರೂ ಹೇಳುತ್ತಿದ್ದಾರಲ್ಲ ಎಂದು ಟಿವಿ ಹಾಕಿಕೊಂಡು ನೋಡಿದೆ. ಆಗ ನಿಜಕ್ಕೂ ಶಾಕ್ ಆಯಿತು. ಇಷ್ಟು ಚಿಕ್ಕವಯಸ್ಸಿನಲ್ಲಿ ಹೀಗಾಗಬಾರದಿತ್ತು. ಅವರ ಕುಟುಂಬಕ್ಕೆ, ಮೇಘನಾಗೆ ದುಃಖ ಭರಿಸುವ ಶಕ್ತಿ ಕೊಡಲಿ.
| ಸುಧಾರಾಣಿ, ಹಿರಿಯ ನಟಿ
ಇದು ನಿಜನೋ, ಸುಳ್ಳೋ ಗೊತ್ತಾಗಲಿಲ್ಲ. ಸುಳ್ಳಾಗಲಿ ಎಂದುಕೊಳ್ಳುತ್ತಿದ್ದೆ. ಆದರೆ ಆಗಲಿಲ್ಲ. ಇನ್ನೂ 39ವರ್ಷ. ಚಿರು ತುಂಬ ಖುಷಿಯಲ್ಲಿರೋನು. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆರಾಮಾಗಿ ಇರುತ್ತಿದ್ದ. ಎಲ್ಲೇ ಕಂಡರೂ ತುಂಬ ಚೆನ್ನಾಗಿ ಮಾತನಾಡಿಸುತ್ತಿದ್ದ. ಇದು ಬೇಸರದ ಸಂಗತಿ.
| ಗಣೇಶ್, ನಟ
ಚಿರಂಜೀವಿ ಎಂದು ಹೆಸರಿಟ್ಟುಕೊಂಡು ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೋಗಿಬಿಟ್ಟರು. ನಾನು ಅವರೊಂದಿಗೆ ಸಿನಿಮಾ ಮಾಡದೆ ಇರಬಹುದು. ಆದರೆ ವೈಯಕ್ತಿಕವಾಗಿ ಚೆನ್ನಾಗಿ ಬಲ್ಲೆ. ತುಂಬ ನೋವಿನ ವಿಷಯ ಇದು.
| ನಾಗತಿಹಳ್ಳಿ ಚಂದ್ರಶೇಖರ್