ಕುಂದಾಪುರ: ಹೊಸಾಡು ಗ್ರಾಮ ಬಂಟ್ವಾಡಿ ಸೌಪರ್ಣಿಕಾ ನದಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆಯು ಸೇತುವೆ, ಕಿಂಡಿ ಅಣೆಕಟ್ಟೆಗೆ ಅಪಾಯ ತರುತ್ತಿರುವುದು ಒಂದು ಕಡೆಯಾದರೆ ಸಮಸ್ಯೆಗೆ ಪರಿಹಾರ ಕೊಡಿ ಅಂತ ದೂರು ನೀಡಿದಾತನ ಸಹಿಯೇ ನಕಲಿ ಮಾಡಿ ಪರವಾನಗಿ ಪಡೆದಿದ್ದಾರೆ.
ಸ್ಥಳದ ದಾಖಲೆ, ಜಾಗದ ಮಾಲೀಕರ ಫೋಟೋ ಸಹಿತ ಜಿಪಿಎಸ್ ಮಾಡಿದ ನಂತರ ಮರಳು ಎತ್ತಲು ಪರವಾನಗಿ ನೀಡಲಾಗುತ್ತದೆ. ಆದರೆ ಬಂಟ್ವಾಡಿ ಸೇತುವೆ ಬಳಿಯ ಸರ್ಕಾರಿ ಜಾಗ ಸಮಸ್ಯೆಗೆ ಸಿಕ್ಕಿ ವಿವಿಧ ಇಲಾಖೆಗೆ ದೂರು ನೀಡಿದ್ದಾತನ ನಕಲಿ ಸಹಿ ಹಾಕಿಸಿಕೊಂಡು ಮರಳು ಡಂಪಿಂಗ್ ಯಾರ್ಡ್ ಮಾಡಿಕೊಳ್ಳಲಾಗಿದೆ. ಸೇತುವೆ ಬಳಿ ಬಂದರು ಮತ್ತು ಮೀನುಗಾರಿಕೆ ಇಲಾಖೆಗೆ ಸೇರಿದ ಜಾಗವಿದ್ದು, ಅದೇ ಜಾಗಕ್ಕೆ ಖಾಸಗಿ ಮಾಲೀಕನ ಆರ್ಟಿಸಿ ಅಟ್ಯಾಚ್ ಮಾಡಿ ಪರಿಸರದಲ್ಲಿದ್ದ ದೂರುದಾರ ಗಜಾನನ ಭಟ್ ಎಂಬುವರ ಸಹಿ ಮಾಡಿದ ಡಾಕ್ಯುಮೆಂಟ್ ನೀಡಿ ಮರಳು ಡಂಪ್ ಮಾಡಲು ಪರವಾನಗಿ ಗಿಟ್ಟಿಸಿಕೊಂಡಿದ್ದಾರೆ.
ಗಣಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭೂಮಿ ದಾಖಲೆ ಸಹಿತ ಜಿಪಿಎಸ್ ಮಾಡಬೇಕಿದ್ದರೂ ಗುತ್ತಿಗೆ ಪಡೆದವರೇ ಜಾಗದ ಆರ್ಟಿಸಿ, ಫೋಟೋ ಕೊಟ್ಟು ಪರವಾನಗಿ ಪಡೆಯುತ್ತಿದ್ದಾರೆ. ಮರಳು ಡಂಪಿಂಗ್ ಯಾರ್ಡ್ ಎಲ್ಲೆಲ್ಲಿ ಇದೆ ಎನ್ನುವ ಮಾಹಿತಿ ಕೂಡ ಗಣಿ ಇಲಾಖೆ ಅಧಿಕಾರಿಗಳ ಬಳಿ ಇಲ್ಲ.
ಬಂಟ್ವಾಡಿ ಹೊಳೆ ಬದಿ ಮರಳು ಡಂಪ್ ಮಾಡಬೇಕಿದ್ದರೆ, ಬಂದರು ಇಲಾಖೆ ಮೂಲಕ ಜಾಗ ಲೀಸ್ ಪಡೆದು, ದಾಖಲೆ ಹಾಜರುಪಡಿಸಿ ಪರವಾನಗಿ ಪಡೆಯಬೇಕು. ಅದನ್ನು ಮಾಡದೆ ಒಳ ಮಾರ್ಗದಲ್ಲಿ ಪರವಾನಗಿ ಪಡೆಯಲಾಗಿದೆ. ನಕಲಿ ದಾಖಲೆ ಸಹಿ ಮಾಡಿದ ಬಗ್ಗೆ ದೂರು ನೀಡಿದ್ದರೂ ಗಣಿ ಇಲಾಖೆ ಕ್ರಿಮಿನಲ್ ಕೇಸ್ ದಾಖಲಿಸಿಲ್ಲ.
ಗಣಿ ಸಮಸ್ಯೆಯಿಂದ ಹಾಳಾದ ರಸ್ತೆ, ವಾಹನಗಳ ಆರ್ಭಟ ಎಲ್ಲದರ ಬಗ್ಗೆ ಜಿಲ್ಲಾಧಿಕಾರಿಯಿಂದ ಹಿಡಿದು ಎಲ್ಲರಿಗೂ ದೂರು ನೀಡಿದ್ದು, ಗಣಿ ಇಲಾಖೆ ಅಧಿಕಾರಿ ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದರು. ಆನಂತರ ಫೋನಲ್ಲಿ ಸಂಪರ್ಕಕ್ಕೆ ಪ್ರಯತ್ನಿಸಿದರೂ ರಿಸೀವ್ ಮಾಡುತ್ತಿಲ್ಲ. ಗಣಿ ಸಮಸ್ಯೆ ಬಗ್ಗೆ ದೂರು ನೀಡಿದ್ದ ನನ್ನ ಸಹಿಯನ್ನೇ ನಕಲಿ ಮಾಡಿ ಮರಳು ಡಂಪ್ ಮಾಡುತ್ತಿದ್ದು, ಈ ಮತ್ತೆ ಮತ್ತೆ ದೂರು ನೀಡಿದ್ದೇನೆ.
ಗಜಾನನ ಭಟ್, ಹೊಸಾಡು ಸೌಪರ್ಣಿಕಾ ನದಿ ತೀರ ನಿವಾಸಿ
ನಕಲಿ ದಾಖಲೆ, ಸರ್ಕಾರಿ ಜಾಗದಲ್ಲಿ ಮರಳು ಡಂಪ್ ಮಾಡುತ್ತಿರುವ ಬಗ್ಗೆ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ, ಕಾನೂನು ಕ್ರಮ ತೆಗೆದುಕೊಳ್ಳಲು ತಕ್ಷಣ ಹೇಳುತ್ತೇನೆ. ಭಾರಿ ವಾಹನಗಳ ಸಂಚಾರ ರಸ್ತೆ ಬದಿ ವಾಹನ ಪಾರ್ಕ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸೂಚಿಸುತ್ತೇನೆ.
ಕೂರ್ಮಾ ರಾವ್, ಜಿಲ್ಲಾಧಿಕಾರಿ, ಉಡುಪಿ