ಡಂಬಳ: ಉಡುಪಿ ಜಿಲ್ಲೆಯ ಕುಂದಾಪುರ ಬಳಿಯ ತ್ರಾಸಿ ಬೀಚ್ನಲ್ಲಿ ಮಂಗಳವಾರ ಮಧ್ಯಾಹ್ನ ಸೆಲ್ಪಿ ತೆಗೆಯುವ ಸಂದರ್ಭದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೇವುಂಡಿ ಗ್ರಾಮದ ಯುವಕ ಪೀರಸಾಬ ನದಾಫ್ (22) ಸಮುದ್ರ ಪಾಲಾಗಿದ್ದ. ಬುಧವಾರ ಶೋಧ ಕಾರ್ಯಾಚರಣೆಯಲ್ಲಿ ಪೀರಸಾಬನ ಶವ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಎರಡು ವರ್ಷಗಳ ಹಿಂದೆ ತಂದೆ ಮೃತಪಟ್ಟಿದ್ದರು. ಬಳಿಕ ಕುಟುಂಬದ ಜವಾಬ್ದಾರಿ ಹೊತ್ತು ಪೀರಸಾಬ ಕೂಲಿ ಕೆಲಸ ಮಾಡಿ ಮನೆ ಸಾಗಿಸುತ್ತಿದ್ದ.
ಹಿರಿಯ ಸಹೋದರಿ ಪಿರಾಂಬಿ ಮದುವೆ ನಿಶ್ಚಯವಾದ ಬಳಿಕ ಮದುವೆ ಮಾಡಿ ಗಂಡನ ಮನೆಗೆ ಕಳಿಸಿಕೊಡುವ ಕನಸು ಹೊತ್ತು ಉಡುಪಿಗೆ ಮೇಸ್ತ್ರಿ ಕೆಲಸ ಮಾಡಲು ತೆರಳಿದ್ದ.
ಮೊಹರಂ ಹಬ್ಬ ಆಚರಣೆ ಮಾಡಲು ಸ್ವಗ್ರಾಮಕ್ಕೆ ಬರುವ ಸಂದರ್ಭದಲ್ಲಿ ದಾರಿ ನಡುವೆ ನಡೆದ ದುರ್ಘಟನೆಯಲ್ಲಿ ಸಮುದ್ರ ಪಾಲಾಗಿದ್ದಾನೆ.