ಮಂಡ್ಯ: ನಗರದ ವಿಶ್ವಜ್ಞಾನಿ ನೌಕರರ ಅಭಿವೃದ್ದಿ ಸಹಕಾರ ಸಂಘವು ಸುಭದ್ರವಾಗಿದೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿದೆ. ಈ ಬಗ್ಗೆ ಯಾವುದೇ ಸದಸ್ಯರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಘದ ಉಪಾಧ್ಯಕ್ಷೆ ಸಿ.ಬಿ.ಅರುಣಾಕ್ಷಿ, ನಿರ್ದೇಶಕ ನಂಜುಂಡಸ್ವಾಮಿ ಸ್ಪಷ್ಟಪಡಿಸಿದರು.
ಸಂಘವು ದಿವಾಳಿಯಾಗಿದೆ, ಷೇರುದಾರರು ತಮ್ಮ ಷೇರು ಹಣವನ್ನು ವಾಪಸ್ ಪಡೆದುಕೊಳ್ಳಿ ಎಂದು ಕೆಲವು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಸಂಘದ ಕೆಲವು ನಿರ್ದೇಶಕರೇ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಾ ಸದಸ್ಯರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಯಾರು ವದಂತಿಗಳಿಗೆ ಕಿಡಿಗೊಡಬೇಡಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮನವಿ ಮಾಡಿದರು.
ಸಂಘದ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಅವ್ಯವಹಾರಗಳು, ಅಕ್ರಮಗಳು ನಡೆದಿವೆ. ಈಗ ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ಕೇವಲ ೬ ತಿಂಗಳಾಗಿದೆ. ಅದಾಗಲೇ ಸಂಘದ ವಿರುದ್ಧ ಪಿತೂರಿ ನಡೆಯುತ್ತಿದೆ. ಈ ಮಧ್ಯೆ ಸಂಘದ ಅಧ್ಯಕ್ಷ ಪ್ರಶಾಂತ್ಕುಮಾರ್ ರಾಜೀನಾಮೆ ನೀಡಿದ್ದಾರೆ. ಅದಿನ್ನೂ ಅಂಗೀಕಾರವಾಗಿಲ್ಲ ಎಂದು ಹೇಳಿದರು.
ನಿರ್ದೇಶಕರಾದ ಪಿ.ರಮೇಶ್, ಜಿ.ಸಿ.ನಿರಂಜನ, ವೆಂಕಟರಾಮು ಹಾಜರಿದ್ದರು.