ಸಿಂಧನೂರು: ಎ.ಜೆ.ಸದಾಶಿವ ಆಯೋಗ ವರದಿ ಯಥಾವತ್ ಜಾರಿ ಮಾಡಲು ಒತ್ತಾಯಿಸಿ ಮಾದಿಗ ಕ್ಷೇಮಾಭಿವೃದ್ಧಿ ಯುವ ಘಟಕ ಮಂಗಳವಾರ ಎಪಿಎಂಸಿ ಗಣೇಶ ದೇವಸ್ಥಾನದಿಂದ ಮಿನಿವಿಧಾನಸೌಧದ ವರೆಗೆ ಪ್ರತಿಭಟನೆ ನಡೆಸಿತು.
ರಾಜ್ಯದ 101 ಪರಿಶಿಷ್ಟ ಜಾತಿಗಳೊಳಗಿನ ಮೀಸಲು ಸೌಲಭ್ಯದಲ್ಲಿ ಕೆಲ ಸ್ಪರ್ಶ ಜಾತಿಗಳು ಸಿಂಹಪಾಲು ಪಡೆಯುತ್ತಿವೆ. ಅಸ್ಪಶ್ಯರಾದ ಮಾದಿಗ ಮತ್ತು ಸಂಬಂಧಿತ ಜಾತಿಗಳ ಜನ ನಿರಂತರ ವಂಚನೆಗೆ ಒಳಗಾಗಿದ್ದಾರೆ. ಆದ್ದರಿಂದ ಕರ್ನಾಟಕದಲ್ಲಿ ಎಸ್ಸಿ ಜಾತಿಗಳಲ್ಲಿರುವ ಜನಸಂಖ್ಯಾವಾರು ಮೀಸಲು ವರ್ಗೀಕರಣ ಮಾಡಿ, ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ನಿರಂತರ ಹೋರಾಟ ಮಾಡಿದ ಪ್ರತಿಫಲವಾಗಿ ಎ.ಜೆ.ಸದಾಶಿವ ಆಯೋಗ 7 ವರ್ಷ ಅಧ್ಯಯನ ನಡೆಸಿ, ವರದಿ ನೀಡಿದೆ. ಆಳುವ ಸರ್ಕಾರಗಳು ವರದಿ ಜಾರಿಗೊಳಿಸಿಲ್ಲ. ಬರೀ ವೋಟ್ ಬ್ಯಾಂಕ್ಗೆ ಮಾತ್ರ ಮಾದಿಗರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.
ಸಂಘದ ಸದಸ್ಯರಾದ ನಾಗರಾಜ ಪೂಜಾರ, ಬಸವರಾಜ ಬಡಿಗೇರ್, ಶರಣಪ್ಪ ಗಿಣಿವಾರ, ನಿರುಪಾದಿ ನಾಗಲಾಪೂರ, ಹೊಳೆಯಪ್ಪ ದಿದ್ದಿಗಿ, ಶಾಂತರಾಜ ಸಾಸಲಮರಿ, ದೇವರಾಜ ಗುಂಜಳ್ಳಿ, ದೇವರಾಜು ಬಪ್ಪೂರು, ಹಲ್ಲೇಶ ಶ್ರೀಪುರಂಜಂಕ್ಷನ್, ಮಹಾದೇವ ಧುಮತಿ, ನಾಗರಾಜ ಸಾಸಲಮರಿ ಇದ್ದರು.