ಈಶ್ವರಮಂಗಲ:ಕರ್ನಾಟಕ ಕೇರಳ ಗಡಿಪ್ರದೇಶದಲ್ಲಿರುವ ಇತಿಹಾಸ ಪ್ರಸಿದ್ಧ ಪವಿತ್ರ ಜಾಂಬ್ರಿ ಗುಹೆಯ ಪರಿಸರದಲ್ಲಿ ತ್ಯಾಜ್ಯಗಳನ್ನು ತಂದು ಎಸೆಯಲಾಗುತ್ತಿದ್ದು, ಗುಹೆಯ ಪಾವಿತ್ರೃಕ್ಕೆ ಧಕ್ಕೆಯಾಗುತ್ತಿದೆ.
ಪಾಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಂಟಾಜೆ ರಕ್ಷಿತಾರಣ್ಯದ ಗುಹೆಯಿರುವ ಚೆಂಡೆತ್ತಡ್ಕ ಪರಿಸರದಲ್ಲಿ ಕೋಳಿ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯಗಳನ್ನು ತಂದು ಎಸೆಯಲಾಗುತ್ತಿದೆ. ಈ ಪರಿಸರ ನಿರ್ಜನವಾಗಿರುವ ಕಾರಣ ರಾತ್ರಿ ವೇಳೆ ಕಸ ತಂದು ಸುರಿಯಲಾಗುತ್ತಿದ್ದು, ಸ್ಥಳದಲ್ಲಿ ಕೊಳೆತು ನಾರುತ್ತಿದೆ. ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಈ ಪರಿಸರಕ್ಕೆ ಬಂದು ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಿ ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕು. ಪವಿತ್ರ ಕ್ಷೇತ್ರ ಮಲಿನವಾಗುವುದನ್ನು ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪರಿಸರವನ್ನು ರಕ್ಷಿಸುವ ಬದಲು ನಾಶ ಮಾಡಲು ಹೊರಟರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ. ಹಾಗಾಗಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನಹರಿಸಿ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು.
– ಮಹಾಬಲೇಶ್ವರ ಭಟ್ ಗಿಳಿಯಾಲು ಸ್ಥಳೀಯ ನಿವಾಸಿನಿರ್ಜನ ಪ್ರದೇಶವಾಗಿರುವ ಕಾರಣ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ. ಆದರೂ ತ್ಯಾಜ್ಯ ಎಸೆಯುವವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳಲು ವ್ಯವಸ್ಥೆ ಮಾಡಲಾಗುವುದು.
– ಭಾರತಿ ವಿ.ಭಟ್, ಪಾಣಾಜೆ ಗ್ರಾಪಂ ಅಧ್ಯಕ್ಷೆ