ಲಂಡನ್: ಭಾರತೀಯರು ಅಷ್ಟೇ ಏಕೆ, ಕ್ರಿಕೆಟ್ ವಿಶ್ವದಲ್ಲಿ ಕ್ರಿಕೆಟ್ ದೇವರು ಎಂದು ಆರಾಧಿಸಲ್ಪಡುವ ಸಚಿನ್ ತೆಂಡುಲ್ಕರ್ ನಿವೃತ್ತಿ ವೇಳೆಗೆ ಯಾರೂ ಅಳಿಸಲಾಗದ ಹಲವು ದಾಖಲೆಗಳನ್ನು ಬರೆದಿದ್ದಾರೆ. ಆದರೆ, ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಕಣ್ಣೀರು ಸುರಿಸಿದ್ದರಂತೆ…! ಏಕೆ?
ಅದು 1989ರಲ್ಲಿ ಪಾಕಿಸ್ತಾನ ಪ್ರವಾಸಕ್ಕೆ ತೆರಳಿದ್ದ ಸಂದರ್ಭ. ಕರಾಚಿಯಲ್ಲಿ ನಿಗದಿಯಾಗಿದ್ದ ಟೆಸ್ಟ್ ಪಂದ್ಯಕ್ಕೆ ನಾನು ಆಯ್ಕೆಯಾಗಿದ್ದೆ. ಅದು ನನ್ನ ವೃತ್ತಿಜೀವನದ ಮೊದಲ ಟೆಸ್ಟ್ ಪಂದ್ಯ. ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಾಗ ಏನು ಮಾಡಬೇಕು ಎಂಬುದು ತಿಳಿಯದ ಅಯೋಮಯ ಸ್ಥಿತಿಯಲ್ಲಿ ನಾನಿದ್ದೆ ಎಂದು 31 ವರ್ಷಗಳ ಬಳಿಕ ಸಚಿನ್ ತೆಂಡುಲ್ಕರ್ ನೆನಪಿಸಿಕೊಂಡಿದ್ದಾರೆ.
ನಾಸೀರ್ ಮೀಟ್ಸ್ ಸಚಿನ್ ಎಂಬ ಕಾರ್ಯಕ್ರಮದಲ್ಲಿ ಮಾಜಿ ಆಟಗಾರ ನಾಸೀರ್ ಹುಸೇನ್ ಸ್ಕೈಸ್ಪೋರ್ಟ್ಸ್ಗಾಗಿ ಸಿದ್ಧಪಡಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಸಚಿನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಅನುಭವ ಹಂಚಿಕೊಂಡಿದ್ದಾರೆ. ಆ ಪಂದ್ಯದಲ್ಲಿ ತಾವು ಶಾಲಾ ಮಟ್ಟದ ಪಂದ್ಯದಲ್ಲಿ ಆಡುವ ರೀತಿ ಆಡಿದ್ದಾಗಿ ಹೇಳಿಕೊಂಡಿದ್ದಾರೆ.
ವಾಸೀಂ ಅಕ್ರಂ ಮತ್ತು ವಕಾರ್ ಯೂನಿಸ್ ತುಂಬಾ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರು. ನಾನು ಕ್ರೀಸ್ಗೆ ಆಗಮಿಸಿದಾಗ ನನ್ನನ್ನು ಬೆದರಿಸಲು ಶಾರ್ಟ್ಪಿಚ್ ಎಸೆತಗಳ ಜತೆಗೆ ಇನ್ನೂ ಏನೇನೋ ತಂತ್ರಗಳನ್ನು ಮಾಡುತ್ತಿದ್ದರು. ನಾನು ಅದುವರೆಗೂ ಆ ರೀತಿಯ ಬೌಲಿಂಗ್ ಅನ್ನು ಎದುರಿಸಿರಲಿಲ್ಲ. ಹಾಗಾಗಿ ನನ್ನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನ ಬ್ಯಾಟಿಂಗ್ ಅನುಭವ ಹಿತವಾಗಿರಲಿಲ್ಲ ಎಂದು ಹೇಳಿದ್ದಾರೆ.
ಆಗಾಗ ನಾನು ಪೇಸ್ ಮತ್ತು ಬೌನ್ಸ್ನಿಂದಾಗಿ ಬೀಟ್ ಆಗುತ್ತಿದ್ದೆ. ನಾನು 15 ರನ್ ಗಳಿಸಿ ಔಟಾಗಿ, ಡ್ರೆಸ್ಸಿಂಗ್ ರೂಂಗೆ ಮರಳುವಾಗ ನನಗೆ ತುಂಬಾ ಮುಜುಗರವಾಗಿತ್ತು ಎಂದು ತಿಳಿಸಿದ್ದಾರೆ.
ಏನು ಮಾಡಿದೆ ನೀನು, ಹಾಗೆ ಏಕೆ ಆಡಿದೆ ನೀನು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಾ ಡ್ರೆಸ್ಸಿಂಗ್ ರೂಂಗೆ ತೆರಳಿದೆ. ಡ್ರೆಸ್ಸಿಂಗ್ ರೂಂ ತಲುಪುತ್ತಲೇ ಶೌಚಗೃಹಕ್ಕೆ ಹೋದ ನಾನು ಕಣ್ಣೀರಿಟ್ಟಿದ್ದೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ನಾನು ಅಸಮರ್ಥ ಎಂಬ ಭಾವನೆ ಮೂಡಿತ್ತು. ಹಾಗಾಗಿ ಇದುವೇ ನನ್ನ ವೃತ್ತಿಜೀವನದ ಮೊದಲ ಹಾಗೂ ಕೊನೆಯ ಟೆಸ್ಟ್ ಪಂದ್ಯ ಆಗಲಿದೆ ಎಂದೇ ಭಾವಿಸಿದ್ದೆ. ನನ್ನ ಆತ್ಮವಿಶ್ವಾಸ ಸಂಪೂರ್ಣ ಕುಸಿದು ಹೋಗಿತ್ತು ಎಂದು ತಿಳಿಸಿದ್ದಾರೆ.
ಆಗ ಭಾರತ ಕ್ರಿಕೆಟ್ ತಂಡದಲ್ಲಿದ್ದ ರವಿಶಾಸ್ತ್ರಿ ಅವರ ಜತೆ ನಾನು ಮಾತನಾಡಿದೆ. ಅವರು ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿವೆ. ಆ ಪಂದ್ಯದಲ್ಲಿ ನಾನು ಶಾಲಾ ಪಂದ್ಯದಲ್ಲಿ ಆಡಿದಂತೆ ಆಡಿದೆ ಎಂದು ಹೇಳಿದರು. ನೀನು ವಿಶ್ವಶ್ರೇಷ್ಠ ಬೌಲರ್ಗಳ ಎಸೆತಗಳನ್ನು ಎದುರಿಸುತ್ತಿರುವೆ ಎಂಬುದನ್ನು ಮರೆಯಬೇಡ. ಹಾಗಾಗಿ ಅವರ ಎಸೆತಗಳಿಗೆ ತಕ್ಕ ಗೌರವ ಕೊಡುವುದನ್ನು ಕಲಿ. ಆಗ ನಾನು ಅವರ ಪೇಸ್ನಿಂದಾಗಿ ಹಲವು ಬಾರಿ ಬೀಟ್ ಆಗಿದ್ದನ್ನು ಪ್ರಸ್ತಾಪಿಸಿದೆ. ಅದಕ್ಕೆ ಅವರು, ಎಲ್ಲರಿಗೂ ಹೀಗೆ ಆಗುತ್ತದೆ. ಕ್ರೀಸ್ಗೆ ಹೋದ ಬಳಿಕ ಅರ್ಧಗಂಟೆ ಸಮಯ ಕಳಿ. ಆಗ ನೀನು ಬೌಲರ್ಗಳ ಪೇಸ್ಗೆ ಹೊಂದಿಕೊಳ್ಳುತ್ತೀಯ. ಆನಂತರದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಹುರಿದುಂಬಿಸಿದರು ಎಂದು ಹೇಳಿದ್ದಾರೆ.
ಅದರಂತೆ ಫೈಸಲಾಬಾದ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯಕ್ಕೆ ನಾನು ಆಯ್ಕೆಯಾಗಿದ್ದೆ. ಆಗ ನಾನು ಸ್ಕೋರ್ಬೋರ್ಡ್ ಕಡೆ ನೋಡದೆ ಗಡಿಯಾರದತ್ತ ಮಾತ್ರ ನೋಡಿಕೊಂಡು ಆಡಬೇಕು ಎಂದು ನಿರ್ಧರಿಸಿದ್ದೆ. ಅದರಂತೆ ನಾನು ಆ ಪಂದ್ಯದಲ್ಲಿ ಗಡಿಯಾರ ನೋಡಿಕೊಂಡು ಆಡಿದೆ. ಅರ್ಧ ಗಂಟೆ ಕ್ರೀಸ್ನಲ್ಲಿ ಕಳೆದ ಬಳಿಕ ಪೇಸ್ಗೆ ಹೊಂದಿಕೊಂಡಿದ್ದೆ. ಆ ಪಂದ್ಯದಲ್ಲಿ ನಾನು 59 ರನ್ ಗಳಿಸಿ ಔಟಾಗಿದ್ದೆ. ಅದುವೇ ನನ್ನ ಚೊಚ್ಚಲ ಅರ್ಧಶತಕವಾಗಿತ್ತು. ಆನಂತರದಲ್ಲಿ ಎಲ್ಲವೂ ಬದಲಾಗಲಾರಂಭಿಸಿತು ಎಂದು ತಿಳಿಸಿದ್ದಾರೆ.
ಸಿನಿಕಾರ್ಮಿಕರಿಗೆ ನೆರವಾಗುವ ಮಾನವೀಯತೆ; ವೆಬ್ ಮೂಲಕ ಸಿನಿಮಾ ಬಿಡುಗಡೆಗೆ ಮುಂದಾದ ಬಾಲಿವುಡ್ ಮಂದಿ