More

    ಶಿವಮೊಗ್ಗದಲ್ಲಿ ಚಾಕು ಇರಿತ: ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಹೋಗಿದ್ದ ಆರೋಪಿಗೆ ಗುಂಡೇಟು

    ಶಿವಮೊಗ್ಗ: ನಿನ್ನೆ (ಸೋಮವಾರ) ಶಿವಮೊಗ್ಗದಲ್ಲಿ ವೀರ್​ ಸಾವರ್ಕರ್ ಹಾಗೂ ಟಿಪ್ಪು ಫೋಟೋ ವಿವಾದ ಭುಗಿಲೆದ್ದು, ಇಬ್ಬರು ಹಿಂದೂ ಯುವಕರಿಗೆ ಚಾಕು ಇರಿದಿರುವ ಘಟನೆ ನಡೆದಿತ್ತು. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿರುವ ವೀರ್​ ಸಾವರ್ಕರ್​ ಅವರ ಫೋಟೋ ಅನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಹಿಂದೂ ಸಂಘಟನೆಯ ಕೆಲವು ಯುವಕರು ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಆ ಫೋಟೋ ಕಿತ್ತೆಸೆದು ಅಲ್ಲಿ ಟಿಪ್ಪು ಫೋಟೋ ಇಡಲು ಮುಂದಾಗಿದ್ದೇ ಈ ಘಟನೆಗೆ ಕಾರಣವಾಗಿತ್ತು.

    ಈ ಫೋಟೋ ವಿವಾದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ನಡುವೆ ಶಿವಮೊಗ್ಗದಲ್ಲಿ ಕಿಚ್ಚು ಹಚ್ಚಿಸಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದರ ಹೊರತಾಗಿಯೂ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಮನೆಗೆ ಹೊರಟಿದ್ದ ಪ್ರೇಮ್​ ಸಿಂಗ್​ ಮತ್ತು ಪ್ರವೀಣ್​ ಕುಮಾರ್​ ಎನ್ನುವವರಿಗೆ ಚಾಕುವಿನಿಂದ ಇರಿದು ಇನ್ನಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಘಟನೆ ನಡೆದಿತ್ತು.

    ಈ ಗಲಾಟೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜಬೀವುಲ್ಲಾ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ತೀರ್ಥಹಳ್ಳಿ ರಸ್ತೆಯ ನಮೋ ಶಂಕರ ಲೇಔಟ್ ನಲ್ಲಿ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಜಬೀವುಲ್ಲಾ ಬಂಧನಕ್ಕೆ ಪೊಲೀಸರು ತೆರಳಿದ್ದರು.

    ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆಯೇ ಜಬೀವುಲ್ಲಾ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಜಬೀವುಲ್ಲಾ ಕಾಲಿಗೆ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಕುರಿ ಫೈರ್ ಮಾಡಿದ್ದಾರೆ. ಗುಂಡೇಟು ತಿಂದ ಈತನನ್ನು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆತನನ್ನು ಪೊಲೀಸರು ಮೆಗ್ಗಾನ್ ಜೈಲ್ ವಾರ್ಡ್ ಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ.

    ಚಾಕು ಇರಿತ ಪ್ರಕರಣ ಸಂಬಂಧ ಈಗಾಗಲೇ ದೊಡ್ಡಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25) ನನ್ನು ಬಂಧಿಸಲಾಗಿದೆ. ಮತ್ತಿಬ್ಬರ ಬಂಧನಕ್ಕೆ ಪೊಲೀಸರಿಂದ ಕಾರ್ಯಾಚರಣೆ ಮುಂದುವರಿದಿದೆ.

    ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ರಾಜಸ್ಥಾನ ಮೂಲದ ಬಾಡಮೇರ ಜಿಲ್ಲೆಯಾವನು. ನಾಲ್ಕು ವರ್ಷದ ಹಿಂದೆ ಶಿವಮೊಗ್ಗಕ್ಕೆ ಕೆಲಸಕ್ಕೆಂದು ಬಂದಿದ್ದ. ಕಳೆದ ಒಂದೂವರೆ ವರ್ಷಗಳಿಂದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ನಿನ್ನೆಯೂ ಅಂಗಡಿ ಮಾಲೀಕರ ಸೂಚನೆಯಂತೆ ಮಧ್ಯಾಹ್ನ ಮೂರು ಗಂಟೆಗೆ ಅಂಗಡಿ ಮುಚ್ಚಿ ಮನೆಗೆ ಹೊರಟಿದ್ದ ಪ್ರೇಮ್ ಸಿಂಗ್. ಈ ವೇಳೆ ಚಾಕುವಿನಿಂದ ಇರಿದ ಜಬೀವುಲ್ಲ ಅಂಡ್ ಗ್ಯಾಂಗ್ ಹಲ್ಲೆ ಮಾಡಿದೆ. ಗಂಭೀರವಾಗಿ ಗಾಯಗೊಂಡಿರುವ ಪ್ರೇಮ್ ಸಿಂಗ್ ಮೆಗ್ಗಾನ್ ಆಸ್ಪತ್ರೆಯ ಎನ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
    . (ದಿಗ್ವಿಜಯ ನ್ಯೂಸ್​)

    ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

    ಮತ್ತೆ ಭುಗಿಲೆದ್ದ ಫೋಟೋ ವಿವಾದ: ಶಿವಮೊಗ್ಗದಲ್ಲಿ ಹಿಂದೂ ಯುವಕನಿಗೆ ಚಾಕು ಇರಿತ- ನಿಷೇಧಾಜ್ಞೆ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts