ವಿಜಯಪುರ: ರಾಜ್ಯ ವಿಧಾನ ಸಭೆ ಚುನಾವಣೆ ಪ್ರಕ್ರಿಯೆ ದಿನೇ ದಿನೇ ಚುರುಕು ಪಡೆಯುತ್ತಿದ್ದು, ದೇವರಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಆರ್. ಪಾಟೀಲ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ !
ಶುಕ್ರವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಸಭೆ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಕ್ಷೇತ್ರದ ಒಂಬತ್ತು ಆಕಾಂಕ್ಷಿಗಳು ಪಕ್ಷದ ನಡೆಗೆ ಆಕ್ರೋಶ ಹೊರಹಾಕಿದ್ದಾರೆ.
ಕಳೆದೊಂದು ವರ್ಷದಿಂದ ಕಾಲಿಗೆ ಚಕ್ರ ಕಟ್ಟಿಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ನಡೆಸಿದ್ದ ಆಕಾಂಕ್ಷಿಗಳನ್ನು ಕಡೆಗಣಿಸಿ ಅನ್ಯ ಜಿಲ್ಲೆಯ ಎಸ್.ಆರ್. ಪಾಟೀಲರನ್ನು ಕಣಕ್ಕಿಳಿಸಲು ತೀರ್ಮಾನಿಸಿರುವ ವಿಷಯ ಕಾರ್ಯಕರ್ತರನ್ನು ವಿಚಲಿತರನ್ನಾಗಿಸಿದೆ ಎಂದು ಪಕ್ಷದ ಆಕಾಂಕ್ಷಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಪಿಸಿಸಿಯಿಂದ ಆಕಾಂಕ್ಷಿಗಳ ಅರ್ಜಿ ಕರೆಯಲಾಗಿ ಒಂಬತ್ತು ಜನ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಯಾರಿಗೆ ಟಿಕೆಟ್ ಸಿಕ್ಕರೂ ಒಮ್ಮತದಿಂದ ಚುನಾವಣೆ ಎದುರಿಸುತ್ತೇವೆಂದು ಈಗಾಗಲೇ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಇದೀಗ ಎಸ್.ಆರ್. ಪಾಟೀಲ ಹೆಸರು ಕೇಳಿ ಬರುತ್ತಿರುವ ಕಾರಣ ಗೊಂದಲ ಸೃಷ್ಠಿಯಾಗಿದೆ. ಜಿಲ್ಲೆಯವರೇ ಅಲ್ಲದವರಿಗೆ ಟಿಕೆಟ್ ಕೊಡುವುದರಿಂದ ಕ್ಷೇತ್ರ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಜಿಲ್ಲೆಯವರೇ ಆದ, ಅರ್ಜಿ ಸಲ್ಲಿಸಿ ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡಬೇಕೆಂಬುದು ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.
ಈಗಾಗಲೇ ಪ್ರಜಾಧ್ವನಿ ಯಾತ್ರೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಒಂಬತ್ತು ಆಕಾಂಕ್ಷಿಗಳ ಪೈಕಿ ಒಬ್ಬರನ್ನು ಸಮೀಕ್ಷೆ ಆಧರಿಸಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ, ಒಂಬತ್ತು ಜನರ ಪೈಕಿ ಯಾರಿಗೆ ಟಿಕೆಟ್ ಸಿಕ್ಕರೂ ಒಮ್ಮತದಿಂದ ಚುನಾವಣೆ ನಡೆಸುವಂತೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಈ ಒಂಬತ್ತು ಜನರ ಪೈಕಿ ಒಬ್ಬರಿಗೆ ಟಿಕೆಟ್ ನೀಡಬೇಕು.
ಹಾಗೊಂದು ವೇಳೆ ಜಿಲ್ಲೆಯವರಲ್ಲದವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಒಂಬತ್ತು ಜನ ಆಕಾಂಕ್ಷಿಗಳು ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಆಕಾಂಕ್ಷಿಗಳಾದ ಆನಂದ ದೊಡ್ಡಮನಿ, ಡಾ. ಪ್ರಭುಗೌಡ ಪಾಟೀಲ, ಗೌರಮ್ಮ ಮುತ್ತತ್ತಿ, ಸೋಮನಾಥ ಕಳ್ಳಿಮನಿ, ಮಲ್ಲನಗೌಡ ಬಿರಾದಾರ, ಮುಖಂಡರಾದ ಬಶೀರ ಶೇಟ, ಬಾಳನಗೌಡ ಪಾಟೀಲ, ರಮಿಜಾ ನದಾಫ್ ಮತ್ತಿತರರಿದ್ದರು.