More

    ಶವಗಾರ ಸೇರಿದ್ದ ಯುವಕನೀತ: ಕೈಕಾಲುಗಳಿಗೆ ರಾಡ್‌ ಇದ್ದರೂ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಕೊಡಗಿನ ವೀರ

    ಕೊಡಗು: ಅಪಘಾತವೊಂದರಲ್ಲಿ ಸತ್ತೇ ಹೋದನೆಂದು ಶವಗಾರ ಸೇರಿ ಮರಣೋತ್ತರ ಪರೀಕ್ಷೆಗೂ ರೆಡಿಯಾಗಿದ್ದ ಯುವಕನೊಬ್ಬ ಈಗ ಹಾಕಿ ಸ್ಪರ್ಧೆಯಲ್ಲಿ ಗೆದ್ದು ಬೀಗಿದ ಘಟನೆ ಕೊಡಗಿನಲ್ಲಿ ನಡೆದಿದೆ. ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ಸೆಣಸಿ ತನ್ನ ತಂಡವನ್ನು ಗೆಲ್ಲುವಂತೆ ಮಾಡಿರುವ ಕೊಡಗಿನ ವೀರ ಯುವಕ ವಿನಯ್.

    2016 ರಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದ ಪೊಲೀಸರು ದೇಹಗಳನ್ನು ಶವಗಾರಕ್ಕೆ ಸಾಗಿಸಿದ್ದರು. ಈ ಪೈಕಿ ವಿನಯ್‌ ಕೂಡ ಒಬ್ಬ. ಮಗನ ಸಾವಿನ ಸುದ್ದಿ ತಿಳಿಯುತ್ತಲೇ ಶವಾಗಾರಕ್ಕೆ ದೌಡಾಯಿಸಿದ್ದ ಅವರ ತಂದೆ ವಾಸು ಮಗನ ಬಳಿ ಬಂದಿದ್ದರು. ದೇಹವೆಲ್ಲಾ ತಣ್ಣಗಾಗಿತ್ತು. ಉಸಿರೂ ನಿಂತಿತ್ತು.

    ಈ ಹಿನ್ನೆಲೆಯಲ್ಲಿ ’ಶವ’ಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು. ಒಂದು ಗಂಟೆ ಶವಾಗಾರದಲ್ಲಿದ್ದ ವಿನಯ್‌ ನನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವಾಗ ಅಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಆತನ ಬೆರಳು ಅಲ್ಲಾಡಿದಂತೆ ಕಂಡಿತು. ಕೂಡಲೇ ಆತನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ವೈದ್ಯರು ದೇಹದಲ್ಲಿ ರಕ್ತವೇ ಇಲ್ಲ, ದೇಹವೂ ಬಹುತೇಕ ತಣ್ಣಗಾಗಿದೆ ಎಂದರು. ಆದರೆ ಸರ್ಜನ್‌ ಒಬ್ಬರು ಟ್ರೈ ಮಾಡೋಣ ಎಂದು ಶಸ್ತ್ರಚಿಕಿತ್ಸೆ ಆರಂಭಿಸಿದ್ದರು. 16 ವೈದ್ಯರ ತಂಡ 10 ಗಂಟೆ ಆಪರೇಷನ್ ಮಾಡಿತ್ತು.

    ಮುಖ ತಲೆ ಭಾಗಕ್ಕೆ ಬರೋಬ್ಬರಿ 68 ಹೊಲಿಗೆ ಹಾಕಿದ್ದರು. ಮುರಿದು ಪುಡಿ ಪುಡಿಯಾಗಿದ್ದ ಎರಡು ತೊಡೆಗಳಿಗೂ, ಎಡಗೈ ತೋಳಿಗೂ ರಾಡ್ ಅಳವಡಿಸಿ ನಂತರ ಐಸಿಯು ವಿಭಾಗಕ್ಕೆ ಆ ದೇಹವನ್ನು ಸ್ಥಳಾಂತರ ಮಾಡಿದ್ದರು. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಜೀವನ್ಮರಣಗಳ ನಡುವೆ ಹೋರಾಟ ಮಾಡಿದ್ದ ವಿನಯ್‌.

    ಸಾವನ್ನು ಜಯಸಿ ಬಂದು ಸ್ಪೋರ್ಟ್ಸ್ ಫಿಜಿಯೋ ಶ್ರವಣ್ ಎಂಬುವವರ ಮಾರ್ಗದರ್ಶನಲ್ಲಿ ತರಬೇತಿ ಪಡೆದು ಹಾಕಿ ಆಟವಾಡಲು ಹೋಗಿದ್ದರು. ಇಂದಿಗೂ ಎರಡು ಕಾಲಿನ ತೊಡೆಗಳಲ್ಲಿ ಹಾಗೂ ಎಡಗೈ ತೋಳಿನಲ್ಲಿ ರಾಡಿದೆ. ಇವರ ತಂಡ ಗೆಲ್ಲುವ ಹಿಂದೆ ವಿನಯ್‌ ಶ್ರಮವಿದೆ.

    ಅಂದಹಾಗೆ ವಿನಯ್‌, 7 ನೇ ತರಗತಿಯಲ್ಲಿ ಇರುವಾಗಲೇ ಸ್ಕೇಟಿಂಗ್ ಹಾಕಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆದವ. ಹಲವು ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಆಟವಾಡಿದ್ದಾನೆ. 2016ರಲ್ಲಿ ಎರಡನೇ ವರ್ಷದ ಪದವಿ ಓದುತ್ತಿರುವಾಗ ಅಂತರ್ ರಾಜ್ಯ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಪಂದ್ಯಾಟದಲ್ಲಿ ಭಾಗವಹಿಸಿದ್ದ ಈತನ ತಂಡ ಪರಾಭವಗೊಂಡಿತ್ತು. ಅದೇ ನೋವಿನಲ್ಲಿ ಮೈಸೂರಿನಿಂದ ಕೊಡಗಿಗೆ ಕಾರಿನಲ್ಲಿ ಬರುತ್ತಿದ್ದ ವೇಳೆ ಇವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿತ್ತು. ಯಾವ ಅಂತರ್ ರಾಜ್ಯ ವಿಶ್ವವಿದ್ಯಾನಿಲಯಗಳ ಮಟ್ಟದ ಹಾಕಿ ಪಂದ್ಯಾಟದಲ್ಲಿ ಸೋತಿದ್ದನೋ ಅದೇ ಹಂತದ ಹಾಕಿ ಪಂದ್ಯಾಟದಲ್ಲಿ ದೇಹದಲ್ಲಿ ಮೂರು ರಾಡುಗಳನ್ನಿಟ್ಟುಕೊಂಡಿದ್ದರೂ ಮತ್ತೆ ಹಾಕಿ ಆಡಿ ವಿಜೇತರಾಗಿ ಬಂದಿದ್ದಾನೆ ಈತ.

    ಇವರ ಕುಟುಂಬ ತೀವ್ರ ಅರ್ಥಿಕ ಸಂಕಷ್ಟದಲ್ಲಿದೆ. ದೇಹದಲ್ಲಿ ರಾಡುಗಳು ಇರುವುದರಿಂದ ಎನ್ಐಎಸ್ ತರಬೇತಿ ಪಡೆಯಬೇಕೆಂದಿದ್ದ ವಿನಯ್ ಕನಸ್ಸು ನುಚ್ಚು ನೂರಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ದುಡಿಮೆಯ ದಾರಿ ಬೇಕಾಗಿದೆ ಎನ್ನುತ್ತಾರೆ ಕೋಚ್ ರಮೇಶ್.

    ಡೋರ್‌ ಲಾಕ್ ಮಾಡದೇ ಕಾರನ್ನು ಬಿಟ್ಟುಬಂದರೆ ಎಚ್ಚರ: ಮೂವರು ಮಕ್ಕಳನ್ನು ಕಳೆದುಕೊಂಡ ಅಪ್ಪ-ಅಮ್ಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts