ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಅವರು ಕೋವಿಡ್ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದಾಗಿ ಶ್ಲಾಘಿಸಿ, ಅವರನ್ನು ಅನೇಕ ಮಂದಿ ಕಾಲುಮುಟ್ಟಿ, ಹೂಗುಚ್ಛ ನೀಡಿ ಸ್ವಾಗತ ಕೋರುವ ವಿಡಿಯೋವೊಂದು ವಾಟ್ಸ್ಆ್ಯಪ್ ಹಾಗೂ ಫೇಸ್ಬುಕ್ಗಳಲ್ಲಿ ನಿನ್ನೆಯಿಂದ ಶೇರ್ ಆಗುತ್ತಿದೆ.
ಇವರು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್. ನರ್ಸಿಂಗ್ ಕೋರ್ಸ್ ಪೂರ್ಣಗೊಳಿಸಿ ಇದೀಗ ಐಎಎಸ್ ಅಧಿಕಾರಿಯಾಗಿರುವ ಇವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡುವಲ್ಲಿ ತೋರಿರುವ ಕೆಲಸಕ್ಕಾಗಿ ಈ ರೀತಿಯ ಸ್ವಾಗತ ಕೋರಲಾಗುತ್ತಿದೆ’ ಎಂಬ ಶೀರ್ಷಿಕೆಯೊಂದಿಗೆ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಅದಕ್ಕೆ ಸ್ಪಷ್ಟನೆ ನಿಡಿರುವ ಅನೀಸ್, ಅಯ್ಯೋ… ನಿನ್ನೆಯಿಂದ ನನಗೆ ಒಂದೇ ಸಮನೆ, ಕಾಲ್, ಮೆಸೇಜ್ಗಳು ಬರುತ್ತಿವೆ. ವಿಷಯ ಏನೆಂದೇ ನನಗೆ ತಿಳಿದಿರಲಿಲ್ಲ. ಅಷ್ಟೊಂದು ಕರೆ, ಮೆಸೇಜ್ಗಳನ್ನು ಸ್ವೀಕರಿಸಿ ಸುಸ್ತಾಗಿಹೋದೆ. ಆಮೇಲೆ ವಿಡಿಯೋ ನೋಡಿದೆ. ಆದರೆ ಆ ವಿಡಿಯೋದಲ್ಲಿ ಇರುವುದು ನಾನಲ್ಲ. ನನ್ನ ಹೆಸರು ಹೇಳಿ ಅದ್ಹೇಗೆ, ಯಾರು ಶೇರ್ ಮಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಉತ್ತರ ಕೊಡಬೇಕಾಗಿ ಬಂದಿದೆ. ದಯವಿಟ್ಟು ನನ್ನ ಹೆಸರನ್ನು ಹೇಳಿಕೊಂಡು ವಿಡಿಯೋ ಶೇರ್ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಷರ್ಟ್ ಬಿಚ್ಚಿ ವಿಚಾರಣೆಗೆ ಬಂದ ಸುಪ್ರೀಂಕೋರ್ಟ್ ವಕೀಲ- ನ್ಯಾಯಮೂರ್ತಿ ಆಕ್ರೋಶ
ನನ್ನ ಬಗ್ಗೆ ಬರೆದಿರುವುದು ಸರಿಯಾಗಿಯೇ ಇದೆ. “ನಾನು 2009 ರಲ್ಲಿ ತಿರುವನಂತಪುರದ ವೈದ್ಯಕೀಯ ಕಾಲೇಜಿನಲ್ಲಿ ನನ್ನ ಶುಶ್ರೂಷಾ ಅಧ್ಯಯನವನ್ನು ಪೂರ್ಣಗೊಳಿಸಿದ್ದೇನೆ. ಐಎಎಸ್ ಪರೀಕ್ಷೆಯನ್ನು 2012ರಲ್ಲಿ ಬರೆದು 65ನೇ ಸ್ಥಾನ ಗಳಿಸಿದ್ದೇನೆ. ಕೊಡಗು ಜಿಲ್ಲೆಯಲ್ಲಿ ಕರೊನಾ ಹೋಗಲಾಡಿಸಲು ಕ್ರಮ ತೆಗೆದುಕೊಳ್ಳುತ್ತಿರುವುದೂ ನಿಜವೇ. ಆ ಬಗ್ಗೆ ಪ್ರತಿದಿನವೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಇವೆಲ್ಲವೂ ಸರಿಯಾಗಿಯೇ ಇದೆ. ಆದರೆ ವಿಡಿಯೋದಲ್ಲಿ ಸನ್ಮಾನ ಮಾಡುತ್ತಿರುವುದು, ಕಾಲುಮುಟ್ಟಿ ಸ್ವಾಗತ ಕೋರುತ್ತಿರುವ ಯುವತಿ ಮಾತ್ರ ನಾನಲ್ಲ ಎಂದಿದ್ದಾರೆ.
ಇಲ್ಲಿಯ ಜನರು ಸರ್ಕಾರದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡುತ್ತಿದ್ದಾರೆ, ಅವರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿ ಎಂದಿದ್ದಾರೆ. ಕೊಡಗು ಜಿಲ್ಲಾಧಿಕಾರಿಯಾಗಿ ಅನೀಸ್ ಅವರು ಇದಾಗಲೇ ಸಾಕಷ್ಟು ಶ್ಲಾಘನಾರ್ಹ ಕಾರ್ಯ ಮಾಡಿರುವ ಕೀರ್ತಿ ಪಡೆದಿದ್ದಾರೆ. ಪ್ರವಾಹ, ಭೂಕುಸಿತದ ಸಂದರ್ಭದಲ್ಲಿಯೂ ಸಾಕಷ್ಟು ದುಡಿದಿರುವುದಾಗಿ ಹೇಳಲಾಗುತ್ತಿದೆ.
ವಿಡಿಯೋದಲ್ಲಿರುವ ಮಹಿಳೆ ಹೈದರಾಬಾದ್ನ ಇ-ಕಾಮರ್ಸ್ ಸಂಸ್ಥೆ ಸೇಫ್ ಶಾಪ್ ಇಂಡಿಯಾದ ಉದ್ಯೋಗಿ ಎಂದು ತಿಳಿದುಬಂದಿದೆ.