ಬೆಂಗಳೂರು: ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಗಂಡು ಮಂಗಕ್ಕೋ? ಹೆಣ್ಣು ಮಂಗಕ್ಕೋ…
ಇಂತಹದ್ದೊಂದು ವಿಷಯ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿ ನಗೆಗಡಲಲ್ಲಿ ತೇಲಿಸಿತು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಈ ಪ್ರಶ್ನೆ ಕೇಳಿದರು. ಮಂಕಿ ಪಾರ್ಕ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದ ಅವರು ಈ ವಿಷಯವನ್ನು ಎತ್ತಿದರು.
ಮಂಕಿ ಪಾರ್ಕ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಇದಕ್ಕಾಗಿ ಆರು ಕೋಟಿ ಹಣ ಕೂಡ ಬಿಡುಗಡೆ ಮಾಡಿದ್ದರು. ಆದರೆ, ಇನ್ನೂ ಪಾರ್ಕ್ ನಿರ್ಮಾಣ ಆಗಲಿಲ್ಲ. ಒಂದೂವರೆ ವರ್ಷದಿಂದ ಯೋಜನೆ ಜಾರಿಯಾಗಿಲ್ಲ. ಈಗ ಬೇರೆಯದೇ ಕಥೆ ಹೇಳುತ್ತಿದ್ದಾರೆ ಎಂದರು.
25 ಲಕ್ಷ ರೂ.ಖರ್ಚು ಮಾಡಿ ಸಂತಾನ ಹರಣ ಮಾಡುತ್ತೇವೆ ಎನ್ನುತ್ತಾರೆ. ಸಂತಾನ ಹರಣ ಯಾವ ಮಂಗಕ್ಕೆ ಮಾಡ್ತಾರೆ? ಹೆಣ್ಣು ಮಂಗಕ್ಕೋ ಗಂಡು ಮಂಗಕ್ಕೋ? ಇದನ್ನು ಸರ್ಕಾರ ಸಷ್ಟ ಪಡಿಸಬೇಕು. ಈ ತರಹ ಅವೈಜ್ಞಾನಿಕ ಯೋಜನೆ ಮಾಡಿದರೆ ಹೇಗೆ? ಎಂದು ಅರಗ ಜ್ಙಾನೆಂದ್ರ ಪ್ರಶ್ನೆ ಮಾಡಿದರು.
ಇದಕ್ಕೆ ಅರಣ್ಯ ಸಚಿವರ ಪರವಾಗಿ ಉತ್ತರಿಸಿದ ಸಚಿವ ಜಗದೀಶ ಶೆಟ್ಟರ್, ಮಂಗಗಳ ಸಂತಾನ ಹರಣ ಮಾಡುತ್ತೇವೆ. ಗಂಡು ಮಂಗಕ್ಕೆ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ.ಅದರ ಜತೆಗೆ ಮಂಕಿ ಪಾರ್ಕ್ ಕೂಡ ಮಾಡುತ್ತೇವೆ.
ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ಮಧ್ಯ ಪ್ರವೇಶಿಸಿದ ಜೆಡಿಎಸ್ ನ ಶ್ರೀನಿವಾಸಗೌಡ, ಕೋಲಾರದಲ್ಲಿ ಮಂಗಗಳು ಮನೆಗೆ ನುಗ್ಗುತ್ತಿವೆ. ಹಿಡಿದುಕೊಂಡು ಹೋಗಿ ಕಾಡಿಗೆ ಬಿಡಿ ಎಂದು ಆಗ್ರಹಿಸಿದರು.
ಆಗ ಬಿಜೆಪಿಯ ಕಳಕಪ್ಪ ಬಂಡಿ, ನಮ್ಮಲ್ಲೂ ಜಿಂಕೆ, ಕಾಡುಹಂದಿ, ಮಂಗಗಳ ಕಾಟ ಜಾಸ್ತಿಯಾಗಿದೆ. ಹೊಡೆಯಲು ನಮ್ಮ ಬಳಿ ಬಂದೂಕು ಇಲ್ಲ. ಹಂದಿಗಳು ಸಾಲು ಹಿಡಿದು ಬಿತ್ತಿದ ಶೇಂಗಾ ತಿನ್ನುತ್ತವೆ. ಜಿಂಕೆಗಳು ಒಳದು ದಿನಕ್ಕೆ 20-30 ಎಕರೆ ಬೆಳೆ ತಿಂದು ಹಾಕುತ್ತವೆ. ಆದರೆ, ಒಂದು ಎಕರೆಗೆ 500 ರೂ. ಪರಿಹಾರ ಕೊಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಆಗ ಸ್ಪೀಕರ್ ಕಾಗೇರಿ, ಅರಣ್ಯರೋಧನ ಎಂದು ಕರೆದಿರುವುದು ಇದನ್ನೇ ಇರಬೇಕು ಎಂದು ಹೇಳಿದರು.
ಬಿಜೆಪಿ ಸಂಸದ ಮನೆಯ ಸಮೀಪ ಬಾಂಬ್ ಬ್ಲಾಸ್ಟ್; ಸಿಸಿಟಿವಿ ಧ್ವಂಸ ಮಾಡಿ 15 ಕಡೆ ಸ್ಫೋಟ
ಟ್ರಕ್ ಚಾಲನೆ ವೇಳೆ ಹೆಲ್ಮೆಟ್ ಧರಿಸಿಲ್ಲ ಎಂದು ಹೀಗೆಲ್ಲಾ ಮಾಡೋದಾ? ಬೇಸ್ತು ಬಿದ್ದ ಚಾಲಕ!
ಯುವತಿ ಮೆಸೇಜ್ನಲ್ಲಿ ಸೆಕ್ಸ್ಗೆ ಅನುಮತಿ ನೀಡಿದ ಮಾತ್ರಕ್ಕೆ ಲೈಂಗಿಕ ಕ್ರಿಯೆ ನಡೆಸುವಂತಿಲ್ಲ ಎಂದ ಹೈಕೋರ್ಟ್